ಕ್ಯಾನ್ ಫಿನಾ ಹಗರಣ, ಕೇತನ್ ಪರೇಖ್ ಗೆ ಶಿಕ್ಷೆ ಖಚಿತ
ಬೆಂಗಳೂರು, ಮಾ.28: ರಾಜ್ಯದ ಕೆನರಾ ಬ್ಯಾಂಕ್ ನ ಮುಚ್ಯೂವಲ್ ಫಂಡ್ ಸೇವಾ ವಿಭಾಗ(ಕ್ಯಾನ್ ಫಿನ್ )ದಲ್ಲಿ ನಡೆದ ಕೋಟ್ಯಾಂತರ ರೂಪಾಯಿ ಹಗರಣದ ಪ್ರಮುಖ ಆರೋಪಿಗಳಾದ ಕೇತನ್ ಪರೇಖ್ ಹಾಗೂ ಹಿತೇನ್ ದಲಾಲ್ ಅವರಿಗೆ ಜೀವಾವಧಿ ಶಿಕ್ಷೆ ನೀಡಲು ಮುಂಬಯಿಯ ಹೈ ಕೋರ್ಟ್ ತಯಾರಿ ನಡೆಸಿದೆ. 1992 ನಡೆದಿದ್ದ ಈ ವಂಚನೆ ಪ್ರಕರಣದ ಅಂತಿಮ ತೀರ್ಪನ್ನು ಏ.1 ರಂದು ನೀಡುವ ಸಾಧ್ಯತೆಗಳಿವೆ.
ನ್ಯಾಯಮೂರ್ತಿ ವಿ.ಎಂ ಕನಾಡೆ ನೇತೃತ್ವದ ವಿಶೇಷ ನ್ಯಾಯಾಲಯದಲ್ಲಿ ಬೆಂಗಳೂರು ಮೂಲದ ಕ್ಯಾನ್ ಫಿನ್(Canbank Financial Services ) ನ ಅಂದಿನ ಮುಖ್ಯಸ್ಥ ಕೇತನ್ ಪರೇಖ್ ಸೇರಿದಂತೆ 6 ಮಂದಿಗೆ ಶಿಕ್ಷೆ ಪ್ರಮಾಣ ಪ್ರಕಟನೆ ಮಾಡುವ ಸಾಧ್ಯತೆಯಿದೆ. ಕ್ಯಾನ್ ಫಿನ್ ಯೋಜನೆಯನ್ನು ತೊಡಗಿಸಿದ್ದ ಹಣವನ್ನು ಬಾಂಬೆ ಶಾಖೆಯ ಕ್ಯಾನ್ ಬ್ಯಾಂಕ್ ಮುಚ್ಯೂವಲ್ ಫಂಡ್ ಖಾತೆಗೆ ವರ್ಗಾಯಿಸಲಾಗಿತ್ತು. ಆದರೆ ಕ್ಯಾನ್ ಫಿನ್ ಗೆ ಪುನಃ ಹಣವನ್ನು ಹಿಂತಿರುಗಿಸದೇ ಪರೇಖ್ ಹಾಗೂ ಇತರ ಷೇರುದಾರರ ಖಾತೆಗೆ ಜಮಾ ಮಾಡಲಾಗಿತ್ತು.
1991 ರ ಅಕ್ಟೋಬರ್ ನಿಂದ 1992 ರ ಜನವರಿ ವರೆಗು ಹಣ ವರ್ಗಾವಣೆ ಪ್ರಕ್ರಿಯೆನಡೆದಿತ್ತು. ಈ ವಂಚನೆಯಿಂದ ಕೆನರಾ ಬ್ಯಾಂಕ್ ನ ಸಬ್ಸಿಡಿ ಸಂಸ್ಥೆ ಕ್ಯಾನ್ ಫಿನ್ ಗೆ 47.7 ಕೋಟಿ ರು ನಷ್ಟವಾಗಿತ್ತು. ಪರೇಖ್ ಅವರು ಅಹಮದಾಬಾದ್ ನ ಮಾಧವಪುರಬ್ಯಾಂಕ್ ನ ವಂಚನೆ ಪ್ರಕರಣದ ಆರೋಪವನ್ನು ಕೂಡಹೊತ್ತಿದ್ದಾರೆ.
ಪರೇಖ್ ಅಲ್ಲದೆ ಕ್ಯಾನ್ ಬ್ಯಾಂಕ್ ನ ಷೇರುದಾರರಾದ ಹಿತೇನ್ ದಲಾಲ್, ಎಸ್ .ಕೆ .ಝವೇರಿ, ಪಲ್ಲವ್ ಸೇಥ್ ಮತ್ತು ನವೀನ್ ಚಂದ್ರ ಪರೇಖ್, ಕ್ಯಾನ್ ಫಿನ್ ನ ಉಪಾಧ್ಯಕ್ಷರಾಗಿದ್ದ ಸಾಯಿನಾಥ್ ಮೋಹನ್, ಎಂ.ಕೆ.ಅಶೋಕ್ ಕುಮಾರ್ ಹಾಗೂ ಮುಚ್ಯೂವಲ್ ಫಂಡ್ ಸೇವಾ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿ.ಆರ್. ಆಚಾರ್ಯಅವರು ವಂಚನೆಯ ಜಾಲದಲ್ಲಿ ಸೇರಿದ್ದಾರೆ
ಕ್ಯಾನ್ ಫಿನ್ ನ ಹೆಚ್ಚುವರಿ ಉಪಾಧ್ಯಕ್ಷ ಎನ್. ಬಾಲಸುಬ್ರಮಣ್ಯಂ,ಮುಚ್ಯೂವಲ್ ಫಂಡ್ ಸೇವಾ ವಿಭಾಗದ ಪ್ರಧಾನ ವ್ಯವಸ್ಥಾಪಕ ಪಿ.ಜೆ. ಸುಬ್ಬರಾವ್ ಹಾಗೂ ವೈಶ್ಯಾ ಬ್ಯಾಂಕ್ ನ ಬಿ.ವಿ.ಶ್ರೀನಿವಾಸನ್ ಅವರನ್ನು ಈಪ್ರಕರಣದಲ್ಲಿ ನಿರ್ದೋಷಿಗಳೆಂದು ಖುಲಾಸೆ ಮಾಡಲಾಗಿದೆ.
(ಯುಎನ್ ಐ)