ವಿಧ್ಯುಕ್ತವಾಗಿ ಬಿಜೆಪಿ ಸೇರಿದಬೆಂಕಿ ಮಹದೇವು
ಬೆಂಗಳೂರು, ಮಾ.28: ಕಾಂಗ್ರೆಸ್ನ ಮಾಜಿ ಸಚಿವ ಎಂ.ಮಹದೇವು ಇಂದು ವಿಧ್ಯುಕ್ತವಾಗಿ ಬಿಜೆಪಿ ಸೇರಿದರು. ಜೆಡಿ(ಎಸ್) ಮಾಜಿ ಶಾಸಕರಾದ ರಾಜಣ್ಣ ಮಾಮನಿ,ಹಾಲಪ್ಪ ಆಚಾರಿ, ಭೀಮಸಿ ಜಾರಕಿಹೊಳಿ, ರಾಮಕೃಷ್ಣ ದೊಡ್ಡಮನಿ, ಮಾಜಿ ಸಚಿವ ವಿರೂಪಾಕ್ಷಪ್ಪ ಅಗಡಿ ಸಹ ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಪಕ್ಷಕ್ಕೆ ಸೇರುವ ಸಂಬಂಧ ಬಿಜೆಪಿ ನಾಯಕರೊಡನೆ ಅತ್ಯುನ್ನತ ಮಟ್ಟದ ಮಾತುಕತೆ ನಡೆಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಜೆಡಿ(ಎಸ್)ನ ಹಿರಿಯ ಮುಖಂಡ ಎಂ.ರಾಜಶೇಖರಮೂರ್ತಿ ಮನೆಯಲ್ಲಿ ಸಭೆ ಸೇರಿದ್ದರು. ಲಿಂಗಾಯತ ನಾಯಕರಾದ ಮಹದೇವು ಮತ್ತು ರಾಜಶೇಖರ ಮೂರ್ತಿಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಸಂಬಂಧ ಮಹತ್ವದ ಚರ್ಚೆ ನಡೆಸಲಾಗಿತ್ತು.
ಡಿ.23, 2007ರಂದು ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಮಾಜಿ ಸಚಿವ ಎಂ.ಮಹದೇವು ಮತ್ತವರ ಬೆಂಬಲಿಗರ ನಡುವೆ ಜಟಾಪಟಿ, ಪರಸ್ಪರ ಅವ್ಯಾಚ ಶಬ್ದಗಳು ವಿನಿಮಯವಾಗಿದ್ದವು. ಸಿದ್ಧರಾಮಯ್ಯ್ಯ ಅವರು ಮಹಾದೇವು ಅವರಿಗೆ ಮುಷ್ಟಿಯಿಂದ ಪಂಚ್ ಸಹ ಕೊಟ್ಟಿದ್ದರು. ಈ ಘಟನೆಯಿಂದ ಮೂಲ ಕಾಂಗ್ರೆಸ್ ಮತ್ತು ವಲಸೆ ಕಾಂಗ್ರೆಸ್ಸಿಗರ ನಡುವಿನ ಮೈಸೂರು ಭಾಗದಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು.
(ದಟ್ಸ್ಕನ್ನಡ ವಾರ್ತೆ)