ಕೇರಳ ಕರ್ನಾಟಕ ಗಡಿ ವಿವಾದಕ್ಕೆ ಮತ್ತೆ ನಾಂದಿ
ಮಂಗಳೂರು, ಮಾ.25: ಕರ್ನಾಟಕದ ಸುಳ್ಯ ತಾಲೂಕಿನ ಮಂಡೆಕೋಲು ಅರಣ್ಯ ಪ್ರದೇಶದಲ್ಲಿ ಕೇರಳ ರಾಜ್ಯದಿಂದ ಒತ್ತುವರಿಯಾಗಿರುವ ಶಂಕೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ಧಲಿಂಗಯ್ಯ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ರಕ್ಷಣಾವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೇರಳಿಗರಿಂದ ಆದ ಒತ್ತುವರಿ ಭೂ ಪ್ರದೇಶದ ಮಾಪನ ಮಾಡುವಂತೆ ಆಗ್ರಹಪಡಿಸಿದ್ದಾರೆ.
ಕರ್ನಾಟಕ ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದ ಸುಮಾರು 2000 ಹೆಕ್ಟೇರು ಭೂ ಪ್ರದೇಶದ ಸಮೀಕ್ಷೆ ಸರಿಯಾಗಿ ನಡೆದಿಲ್ಲ.ಈ ಬಗ್ಗೆ ದಾಖಲೆಗಳು ಕೂಡ ಮಾಯವಾಗಿದೆ. ಇದರೊಟ್ಟಿಗೆ 4.85 ಕಿ.ಮೀ ಕಚ್ಚಾ ರಸ್ತೆ ಕೂಡ ಸಮೀಕ್ಷೆಯಲ್ಲಿ ಸೇರಿಲ್ಲ. ಸರಿಯಾಗಿ ಜಾಗ್ರತೆವಹಿಸದಿದ್ದರೆಒಟ್ಟು 350 ಎಕರೆ ಭೂ ಪ್ರದೇಶವನ್ನು ಕರ್ನಾಟಕ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಸಿದ್ದಲಿಂಗಯ್ಯ ಹೇಳಿದರು.
ಹಳೆ ಮದರಾಸು ಪಾಂತ್ರ್ಯ ವಿಭಜನೆಗೊಂಡ ದಾಖಲೆ ಹಾಗೂ 1961 ರಲ್ಲಿ ತಮಿಳುನಾಡಿನ ರಬ್ಬರ್ ಎಸ್ಟೇಟ್ ಕಾರ್ಮಿಕರನ್ನು ಈ ಭಾಗದಲ್ಲಿ ನೆಲೆಗೊಳಿಸಲು ಸಿರಿಮಾವೊ ಬಂಡಾರ ನಾಯಿಕೆ ಹಾಗೂ ಶಾಸ್ತ್ರಿ ಅವರ ನಡುವೆ ಆದ ಒಪ್ಪಂದದ ಪ್ರಕಾರ ಸದರಿ ಭೂ ಪ್ರದೇಶ ಕರ್ನಾಟಕಕ್ಕೆ ಸೇರಿದೆ ಎಂಬುದನ್ನು ನಿಶ್ಚಯವಾಗಿ ಹೇಳಬಹುದು. ಈ ಬಗ್ಗೆ ಕೆಲ ಅಧಿಕಾರಿಗಳು ನಿರ್ಲಕ್ಷ ತೋರುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ದಕ್ಷಿಣ ಕನ್ನಡಜಿಲ್ಲಾಧಿಕಾರಿ ಎಂ. ಮಹೇಶ್ವರ ರಾವ್ ಅವರೊಂದಿಗೆ ಮಾತನಾಡಿದ್ದು, ಕೂಡಲೇ ಕಾಸರಗೋಡು ಜಿಲ್ಲಾಧಿಕಾರಿಗಳೊಡನೆ ಸಮಾಲೋಚನೆ ನಡೆಸಲು ತಿಳಿಸಲಾಗಿದೆ ಎಂದು ಸಿದ್ದಲಿಂಗಯ್ಯ ಸುದ್ದಿಗಾರರಿಗೆ ತಿಳಿಸಿದರು.
(ದಟ್ಸ್ಕನ್ನಡ ವಾರ್ತೆ)