ಭ್ರಷ್ಟ್ರರ ವಿರುದ್ಧ ಲೋಕಾಯುಕ್ತ ಹೈಟೆಕ್ ಸಮರ
ಬೆಂಗಳೂರು, ಮಾ.20: ಭ್ರಷ್ಟ ಹಾಗೂ ಕರ್ತವ್ಯ ಲೋಪ ಎಸಗುವ ಸರ್ಕಾರಿ ನೌಕರರು, ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಹೈಟೆಕ್ ಸಮರ ಸಾರಲಿದೆ. ದಿನದ 24 ಗಂಟೆಯೂ ದೂರು ಹೇಳಬಹುದಾದ ಲೋಕಾಯುಕ್ತರ ಸಹಾಯವಾಣಿ ಹಾಗೂ ಅಂತರ್ಜಾಲ ಸೇವೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಸಾರ್ವಜನಿಕರು ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತೊಂದರೆ ಕೊಡುವ ಭ್ರಷ್ಟ ಅಧಿಕಾರಿಗಳು, ಸರ್ಕಾರಿ ನೌಕರರ ವಿರುದ್ಧ ಲೋಕಾಯುಕ್ತರಿಗೆ ತಿಳಿಸಬಹುದು.
ಮಧ್ಯರಾತ್ರಿಯ ನಂತರ ಯಾವುದಾದರೂ ಸರ್ಕಾರಿ ಆಸ್ಪತ್ರೆ, ಚೆಕ್ಪೋಸ್ಟ್ ಮತ್ತಿತರ ಸರ್ಕಾರಿ ಸಂಸ್ಥೆಗಳಲ್ಲಿ ಭ್ರಷ್ಟ ಅಧಿಕಾರಿಗಳಿಂದ ಕಿರುಕುಳ ಉಂಟಾದರೆ ನೇರವಾಗಿ ಲೋಕಾಯುಕ್ತರಿಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಗಳಿಸಿರುವ ಅಕ್ರಮ ಆಸ್ತಿ, ವಿಪರೀತ ಭ್ರಷ್ಟಾಚಾರದಲ್ಲಿ ತೊಡಗಿರುವವರ ವಿರುದ್ಧ ಲೋಕಾಯುಕ್ತ ಪ್ರಾರಂಭಿಸಲಿರುವ ನೂತನ ಅಂತರ್ಜಾಲದಲ್ಲಿ ವಿವರಗಳ್ನ್ನು ನೀಡಬಹುದು. ದೂರು ನೀಡುವವರು ತಮ್ಮ ವೈಯಕ್ತಿಯ ವಿವರಗಳನ್ನು ನೀಡಲೇಬೇಕು ಎಂದೇನು ಇಲ್ಲ.
ಲೋಕಾಯುಕ್ತ ಅಂತರ್ಜಾಲಕ್ಕೆ ಬಂದ ದೂರುಗಳನ್ನು ಖುದ್ದು ಲೋಕಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಮತ್ತು ಹೆಚ್ಚುವರಿ ಪೊಲೀಸ್ ನಿರ್ದೇಶಕ ರೂಪ್ ಕುಮಾರ್ ಮಾತ್ರ ನೋಡಲು ಸಾಧ್ಯವಾಗುತ್ತದೆ. ದೂರುಗಳನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮಕ್ಕೆ ಲೋಕಾಯುಕ್ತರು ಮುಂದಾಗುತ್ತಾರೆ. ದೂರು ನೀಡಿದವರ ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ. ಉಚಿತ ದೂರವಾಣಿ ಸಂಖ್ಯೆ ಮತ್ತು ವೆಬ್ ವಿಳಾಸವನ್ನು ಮಾ.25ರಂದು ಒಟ್ಟಿಗೆ ಬಿಡುಗಡೆಯಾಗುತ್ತಿವೆ.
(ದಟ್ಸ್ಕನ್ನಡ ವಾರ್ತೆ)