ಶಿವಾನಿ ಕೊಲೆ ಪ್ರಕರಣ ಶರ್ಮಾ ತಪ್ಪಿತಸ್ಥ: ಕೋರ್ಟ್
ನವದೆಹಲಿ, ಮಾ.18: ಇಂಡಿಯನ್ ಎಕ್ಸ್ಪ್ರೆಸ್ ಪತ್ರಕರ್ತೆ ಶಿವಾನಿ ಭಟ್ನಾಗರ್ ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಐಪಿಎಸ್ ಅಧಿಕಾರಿ ರವಿಕಾಂತ್ ಶರ್ಮಾ ಹಾಗೂ ಇನ್ನಿತರ ಮೂವರನ್ನು ಅಪರಾಧಿಗಳು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಲಯ ಮಂಗವಾರ ತೀರ್ಪು ನೀಡಿದೆ.
ಜ.23, 1999ರಂದು ಪೂರ್ವ ದೆಹಲಿಯ ತಮ್ಮ ಫ್ಲಾಟ್ನಲ್ಲಿ ಶಿವಾನಿ ಭಟ್ನಾಗರ್ ಕೊಲೆಯಾಗಿದ್ದರು. ಈ ಕೊಲೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಜೇಂದ್ರ ಕುಮಾರ್ ಶಾಸ್ತ್ರಿ ಐಪಿಎಸ್ ಅಧಿಕಾರಿ ಆರ್.ಕೆ.ಶರ್ಮಾ ಮತ್ತು ಅವರ ಸಹಾಯಕರಾದ ಪ್ರದೀಪ್ ಶರ್ಮಾ, ಸತ್ಯ ಪ್ರಕಾಶ್, ಶ್ರೀ ಭಗವಾನ್ ತಪ್ಪಿತಸ್ಥರು ಎಂದು ತೀರ್ಪು ನೀಡಿದರು. ಈ ಅಪರಾಧಿಗಳಿಗೆ ನೀಡುವ ಶಿಕ್ಷೆಯನ್ನು ಗುರುವಾರ(ಮಾ.20)ರಂದು ಪ್ರಕಟಿಸಲಾಗುತ್ತದೆ.
ಈ ನಾಲ್ಕು ಮಂದಿ ಅಪರಾಧಿಗಳನ್ನು ಭಾರತ ದಂಡ ಸಂಹಿತೆ ಸೆಕ್ಷನ್ 302(ಕೊಲೆ) ಮತ್ತು ಸೆಕ್ಷನ್ 102(ಕೊಲೆಗೆ ಸಂಚು ರೂಪಿಸಿದ) ಪ್ರಕಾರ ತಪ್ಪಿತಸ್ಥರೆಂದು ಋಜುವಾಗಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿದ್ದ ವೇದ್ ಪ್ರಕಾಶ್ ಶರ್ಮಾ ಹಾಗೂ ಕಲು ಎಂಬುವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಐಪಿಎಸ್ ಅಧಿಕಾರಿ ಆರ್.ಕೆ.ಶರ್ಮಾ 2002ರಲ್ಲಿ ಅಂಬಾಲ ನ್ಯಾಯಾಲಯದಲ್ಲಿ ಶರಣಾಗಿದ್ದರು. ಆರ್.ಕೆ.ಶರ್ಮಾ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ. ಪತ್ರಕರ್ತೆಶಿವಾನಿ ಭಟ್ನಾಗರ್ ಅವರೊಂದಿಗೆ ಆಪ್ತ ಸಂಬಂಧ ಹೊಂದಿದ್ದ ಶರ್ಮಾಅವರನ್ನು ಮದುವೆಯಾಗಲು ಶಿವಾನಿ ಒತ್ತಾಯಿಸುತ್ತಿದ್ದರು.
(ಏಜೆನ್ಸೀಸ್)