ನಿದ್ದೆ ಕೆಡಿಸಿದ್ದ ಹುಲಿರಾಯ ಕೊನೆಗೂ ಬೋನಿಗೆ ಬಿದ್ದ
ಮಡಿಕೇರಿ, ಮಾ.18 : ಕಳೆದೆರಡು ತಿಂಗಳಲ್ಲಿ 33 ಜಾನುವಾರುಗಳ ರಕ್ತ ಹೀರಿ ದಕ್ಷಿಣ ಮಡಿಕೇರಿ ಹಳ್ಳಿಗರ ನಿದ್ದೆ ಕೆಡಿಸಿದ್ದ 'ದಿ ಕ್ಯಾಟಲ್ ಈಟರ್ ಆಫ್ ಮಡಿಕೇರಿ' ಕೊನೆಗೂ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ರಾತ್ರಿ ವೇಳೆಯಲ್ಲಿ ನೇರವಾಗಿ ಕೊಟ್ಟಿಗೆಗೇ ನುಗ್ಗುತ್ತಿದ್ದ ಹುಲಿರಾಯ ನಾಗರಹೊಳೆ ಅರಣ್ಯ ಪ್ರದೇಶದ ಸುತ್ತಲಿನ ಹಳ್ಳಿಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದ. ಹುಲಿ ಬೋನಿಗೆ ಬಿದ್ದಿದ್ದರಿಂದ ಹಳ್ಳಿಗರು ನಿರಾಳರಾದರೂ ದನಕರುಗಳನ್ನು ಕಳೆದುಕೊಂಡಿದ್ದಕ್ಕೆ ಸ್ಥಳದಲ್ಲೇ ಪರಿಹಾರ ನೀಡಬೇಕು, ಇಲ್ಲದಿದ್ದರೆ ಹುಲಿಯನ್ನು ಮೈಸೂರಿಗೆ ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲವೆಂದು ಪಟ್ಟುಹಿಡಿದಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ದನ ಕಳೆದುಕೊಂಡವರ ಕೂಗಿಗೆ ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲವೆಂದು ಹಳ್ಳಿಗರು ಇತ್ತೀಚೆಗೆ ದೂರಿದ್ದರು. ಕಡೆಗೂ ಹಳ್ಳಿಗರ ಬೇಡಿಕೆಗೆ ಸ್ಪಂದಿಸಿದ ಇಲಾಖೆ ಕಳೆದ ರಾತ್ರಿ ದನವೊಂದರ ಕಳೆಬರವಿದ್ದ ಬೋನನ್ನು ತರೆಲು ಹಳ್ಳಿಯ ಅಯ್ಯಣ್ಣ ಎಂಬುವವರ ಗದ್ದೆಯಲ್ಲಿ ಇಟ್ಟಿತ್ತು. ದನದ ಬೇಟೆಗೆ ಬಂದ ಹುಲಿ ಮಂಗಳವಾರ ಮುಂಜಾವಿನಲ್ಲಿ ಬೋನಿಗೆ ಬಿದ್ದಿತು.
ಹುಲಿ ಬೋನಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಲಿನ ಗ್ರಾಮಸ್ಥರು ಬಂದು ಜಮಾಯಿಸಿದರು. ದನಕರು ಕಳೆದುಕೊಂಡವರು ತಲಾ 15 ಸಾವಿರ ರು. ಪರಿಹಾರ ನೀಡಬೇಕು ಹಾಗು ಪತ್ರಕರ್ತ ಮತ್ತು ತೋಟಗಾರನ ವಿರುದ್ಧ ಅರಣ್ಯಾಧಿಕಾರಿ ಸುಳ್ಳು ಕೇಸ್ ಹಾಕಿದ್ದನ್ನು ಕೂಡಲೆ ಹಿಂದೆ ಪಡೆಯಬೇಕೆಂದು ಪಟ್ಟು ಹಿಡಿದರು. ಹುಲಿ ಬಗ್ಗೆ ವಿವರ ತಿಳಿಯಲು ಡಿಎಫ್ಓ ಬಳಿ ಹೋದ ಇವರಿಬ್ಬರನ್ನು ಅರಣ್ಯಾಧಿಕಾರಿ ನಿಂದಿಸಿ ಕೇಸ್ ಹಾಕಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಸರ್ಕಲ್ ಇನ್ಸ್ಪೆಕ್ಟರ್ ಕೇಸನ್ನು ಹಿಂತೆಗೆಯುವುದಾಗಿ ಹೇಳಿದರೂ ಗ್ರಾಮಸ್ಥರು ಪರಿಹಾರ ನೀಡಬೇಕೆಂಬ ಪಟ್ಟನ್ನು ಸಡಿಲಪಡಿಲಿಲ್ಲ.
(ಯುಎನ್ಐ)