ಕುಖ್ಯಾತ ದರೋಡೆಕೋರ ಸರ್ದಾರ್ ತಂಡ ಬಂಧನ
ಬೆಂಗಳೂರು, ಮಾ. 16 : ನಗರದಲ್ಲಿ ಇತ್ತೀಚೆಗೆ ನಡೆದ ದರೋಡೆ ಪ್ರಕರಣಗಳ ಪ್ರಮುಖ ಅರೋಪಿ ರೌಡಿ ಸರ್ದಾರ್ ಸೇರಿದಂತೆ ಐವರನ್ನು ಉತ್ತರ ವಿಭಾಗ ಪೊಲೀಸರ ವಿಶೇಷ ತಂಡ ಬಂಧಿಸಿದೆ.
ಶಿವಮೊಗ್ಗ ನಾಗನ ತಂಡದ ನಂದಿನಿಲೇಔಟ್ ಕೃಷ್ಣಾನಂದನಗರದ ಸರ್ದಾರ್ (38), ಸಹಚರರಾದ ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲೂಕು ಲಿಂಗದಹಳ್ಳಿಯ ಮಹ್ಮದ್ ಮಲ್ಲಿಕ್ ಅಲಿಯಾಸ್ ನೂರ್ ಮಹ್ಮದ್ ಉರುಫ್ ದುಗ್ಗಾಪುರ (29), ನೆಲಮಂಗಲ ತಾಲೂಕು ತಾಳೆಕೆರೆ ಗ್ರಾಮದ ಪ್ರಕಾಶ್ (25), ತಮಿಳುನಾಡು ಮೂಲದ ಶ್ರೀನಿವಾಸ ಅಲಿಯಾಸ್ ಸೀನಾ (23) ಹಾಗೂ ಜೆಪಿ ನಗರ ಒಂದನೇ ಹಂತ ಮಾರೇನಹಳ್ಳಿ ಪಾಳ್ಯದ ಮೋಹನ್ರಾಜ್ ಅಲಿಯಾಸ್ ಮೋಹನ್ (20) ಬಂ ಧಿತರು.
ಕಳೆದ ಗುರುವಾರ ರಾತ್ರಿ ಬಳ್ಳಾರಿ ರಸ್ತೆಯಲ್ಲಿರುವ ಮಿಲಿಟರಿ ಡೈರಿ ಫಾಮ್ ಗೇಟ್ ಬಳಿ ಇನೋವಾ ಕಾರಿನಲ್ಲಿ ಶಸ್ತ್ರಸಜ್ಜಿತರಾಗಿ ದರೋಡೆಗೆ ಹೊಂಚುಹಾಕುತ್ತಿದ್ದ ಆರೋಪಿಗಳನ್ನು ವಿಶೇಷ ತಂಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು. ಉತ್ತರ ವಿಭಾಗದ ಡಿಸಿಪಿ ಸೈಯದ್ ಉಲತ್ ಹುಸೇನ್, ಜೆಸಿ ನಗರ ಉಪ ವಿಭಾಗದ ಎಸಿಪಿ ಬಿ.ಬಿ. ಅಶೋಕ್ಕುಮಾರ್, ಯಶವಂತಪುರ ಉಪ ವಿಭಾಗದ ಎಸಿಪಿ ಪ್ರತಾಪ್ಸಿಂಗ್ ನೇತೃತ್ವದಲ್ಲಿ ವಿಶೇಷ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದರು ಎಂದು ಪೊಲೀಸ್ ಆಯುಕ್ತ ಎನ್. ಅಚ್ಯುತರಾವ್ ಸುದ್ದಿಗಾರರಿಗೆ ತಿಳಿಸಿದರು.
ಒಂದು ಕೋಟಿ ರೂ. ಮೌಲ್ಯದ 5 ಕೆಜಿ ಚಿನ್ನ ಹಾಗೂ ಬೆಳ್ಳಿ ಆಭರಣ, ಮಾರುತಿ ಆಲ್ಟೊ, ಟೊಯೊಟಾ ಇನೋವಾ ಕಾರುಗಳು, 4 ಲಕ್ಷ ರೂ. ನಗದು, 15 ಮೊಬೈಲ್ಫೋನ್, ಮೂರು ಕ್ಯಾಮೆರಾ, ಗಿರವಿ ರಸೀದಿಗಳು ಹಾಗೂ ಕೃತ್ಯಕ್ಕೆ ಬಳಿಸಿದ ಮಂಕಿ ಕ್ಯಾಪ್, ಕೈಚೀಲ, ಕಾಲು ಚೀಲ, ಮಚ್ಚು, ಲಾಂಗ್ ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬಂಧನದಿಂದ ಮಡಿವಾಳ ಠಾಣೆ ವ್ಯಾಪ್ತಿಯ ಖ್ವಾಜಾ ಮೊಹಿದ್ದೀನ್ ಎಂಬ ವ್ಯಾಪಾರಿ ಮನೆಯಲ್ಲಿ ಇತ್ತೀಚೆಗೆ ನಡೆದ ದರೋಡೆ ಪ್ರಕರಣವಲ್ಲದೇ ವಿದ್ಯಾರಣ್ಯಪುರದ ವೈದ್ಯರೊಬ್ಬರ ಮನೆಗಳಿಗೆ ನುಗ್ಗಿದ ದರೋಡೆಕೋರರು, ಬೆದರಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದರು. ಚಿಕ್ಕಮಗಳೂರು ಜಿಲ್ಲೆ ಕಡೂರು, ಆನೇಕಲ್, ತಾವರೆಕೆರೆ, ಆರ್ಎಂಸಿ ಯಾರ್ಡ್, ಬಿಡದಿ, ಮಹಾಲಕ್ಷ್ಮಿ ಲೇಔಟ್, ವಿದ್ಯಾರಣ್ಯಪುರ, ಮಡಿವಾಳ, ತಮಿಳುನಾಡಿನ ಈರೋಡ್ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಆರೋಪಿಗಳು ದರೋಡೆ ಮಾಡಿರುವುದು ಕಂಡು ಬಂದಿದೆ ಎಂದು ಪೊಲೀಸ್ ಆಯುಕ್ತ ಎನ್. ಅಚ್ಯುತರಾವ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)