ಬರೀ ಐವತ್ತುಸಾವಿರಕ್ಕೆ ಮಾನಹೋಯ್ತಲ್ಲೋ ಶ್ರೀಕಂಠು
ಬೆಂಗಳೂರು, ಮಾ. 14 : ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಮುಚ್ಚಿಹಾಕಲು ಲಂಚ ಪಡೆದ ಚಾಮರಾಜನಗರ ಪೊಲೀಸ್ ಸೂಪರಿಂಟೆಂಡೆಂಟ್ ಶ್ರೀಕಂಠಪ್ಪ ಅವರನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ಗುರುವಾರ ಹಿಡಿದಿದ್ದಾರೆ. ಎಸ್ ಪಿ ಮಟ್ಟದ ಪೊಲೀಸ್ ಅಧಿಕಾರಿಯೊಬ್ಬರನ್ನು ಲಂಚ ಸ್ವೀಕರಿಸುತ್ತಿದ್ದಾಗ ಹಸಿಹಸಿಯಾಗಿ ಹಿಡಿದು ಹಾಕಿದ ಮೊದಲ ಉದಾಹರಣೆ ಇದಾಗಿದೆ.
ಚಾಮರಾಜನಗರ ಪೂರ್ವ ಠಾಣೆಯಲ್ಲಿ ಎಸ್. ಎಂ. ಫರೂಕ್ ಎಂಬುವವರ ವಿರುದ್ಧ ಒಂದು ಕೇಸು ದಾಖಲಾಗಿತ್ತು. ಆ ಕೇಸನ್ನು ಮುಚ್ಚಿಹಾಕುವುದಕ್ಕೆ ಸುಬ್ಬಣ್ಣ ಎಂಬ ಏಜೆಂಟು ಮತ್ತು ಶ್ರೀಕಂಠಪ್ಪ ಕರಾಮತ್ತು ಮಾಡಿದ್ದರು. ಶ್ರೀಕಂಠಪ್ಪ 25 ಸಾವಿರ ರೂಪಾಯಿ ಸಂಚ ನಿಗದಿ ಮಾಡಿದ್ದರು. ಲಂಚ ಸ್ವೀಕರಿಸುವ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಎಸ್ ಪಿ ಮತ್ತು ಆ ಏಜೆಂಟ್ ಸುಬ್ಬಣ್ಣ ಇಬ್ಬರನ್ನೂ ಬಲೆಗೆ ಕೆಡವಿದರು.
ಚಾಮರಾಜನಗರ ವ್ಯಾಪ್ತಿಯಲ್ಲಿ ಬರುವ ಒಂದು ಗಣಿಗೆ ಅನುಮತಿ ಕೊಡುವುದಕ್ಕೆ ಇದೇ ಶ್ರೀಕಂಠಪ್ಪನವರು ಅಕ್ಬರ್ ಎಂಬುವವರಿಂದ 25 ಸಾವಿರ ಲಂಚ ಕೇಳಿದ್ದರು. ಅಕ್ಬರ್ ಮತ್ತು ಫರೂಕ್ ಇಬ್ಬರೂ ಸೇರಿಕೊಂಡು ಲಂಚ ಕೇಳುತ್ತಿರುವ ಬಗೆಗೆ ಮೈಸೂರು ಲೋಕಾಯುಕ್ತದ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರು. ಇವರಿಬ್ಬರಿಂದ ಒಟ್ಟು 50 ಸಾವಿರ ಇಸ್ಕೊಂಡು ಏಜೆಂಟ್ ಸುಬ್ಬಣ್ಣ ಶ್ರೀಕಂಠಪ್ಪ ಅವರಿಗೆ ಕೊಡುತ್ತಿದ್ದಾಗ ಲೋಕಾಯುಕ್ತ ಪ್ರತ್ಯಕ್ಷವಾಯಿತು. ದೊಡ್ಡ ಪೊಲೀಸ್ ಅಧಿಕಾರಿಯ ಬಂಡವಾಳ ಬಯಲಾಯಿತು.
1983ರ ಕೆಎಸ್ಪಿಸಿ ಬ್ಯಾಚ್ಗೆ ಸೇರಿದ ಈ ಶ್ರೀಕಂಠಪ್ಪ ಮುಂಚೆ ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದರು. ಅವರ ವಿರುದ್ಧ ಒಂದು ಇಲಾಖಾ ತನಿಖೆಯೂ ನಡೆದಿತ್ತು. ಆದರೆ, ಆ ಆರೋಪಗಳೆಲ್ಲ ಕಡತಗಳಲ್ಲಿ ದಫನ್ ಆಗಿ ಶ್ರೀಕಂಠಪ್ಪ ಚಾಮರಾಜನಗರಕ್ಕೆ ವರ್ಗವಾಗಿ ಬಂದಿದ್ದರು. ಶ್ರೀಕಂಠಪ್ಪ ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲೂಕಿನ ಬೆಣಗರಹಳ್ಳಿಯವರು. ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಹೆಂಡತಿ ಡಾಕ್ಟರ್ರು. ಶ್ರೀಕಂಠಪ್ಪನವರ ಮನೆ ವಿಳಾಸ, 9ನೇ ಮುಖ್ಯರಸ್ತೆ, 3ನೇ ತಿರುವು, ಪಡುವಾರಹಳ್ಳಿ (ವಿನಾಯಕನಗರ), ಮೈಸೂರು.
(ದಟ್ಸ್ ಕನ್ನಡ ವಾರ್ತೆ)