ಹೈದರಾಬಾದ್ ವಿಮಾನ ನಿಲ್ದಾಣಕ್ಕೂ ಅಡೆತಡೆ
ಹೈದರಾಬಾದ್, ಮಾ.14 : ರಂಗಾರೆಡ್ಡಿ ಜಿಲ್ಲೆಯ ಶಂಸಾಬಾದ್ನಲ್ಲಿ ಇಂದು ಉದ್ಘಾಟನೆಯಾಗಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ವಿಮಾನ ಹಾರುವ ಮೊದಲೇ ಸಂಕಷ್ಟ ಎದುರಾಗಿದೆ.
ಮುಖ್ಯ ಮಂತ್ರಿ ರಾಜಶೇಖರ ರೆಡ್ಡಿ ನಾಯಕತ್ವದಲ್ಲಿ ರಾಜ್ಯದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ವಿಮಾನ ನಿಲ್ದಾಣಕ್ಕೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ನಿಲ್ದಾಣದ ಹೆಸರನ್ನು ಬದಲಾಯಿಸುವವರೆಗೂ ವಿಮಾನ ಹಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ತೆಲುಗು ದೇಶಂ ಪಕ್ಷ ಕ್ಯಾತೆ ತೆಗೆದಿದೆ. ಮಾರ್ಚ್ 16ರಿಂದ ವಾಣಿಜ್ಯ ವಿಮಾನಗಳ ಹಾರಾಟ ಪ್ರಾರಂಭವಾಗಲಿದೆ.
ತೆಲುಗು ದೇಶಂ ಪಕ್ಷದ ಕಾರ್ಯಕರ್ತರ ತೀವ್ರ ಪ್ರತಿಭಟನೆಯ ನಡುವೆಯೂ ಬಿಗಿ ಭದ್ರತೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಅಂತಾರಾಷ್ಟ್ರೀಯ ನಿಲ್ದಾಣವನ್ನು ಉದ್ಘಾಟಿಸಿದರು. ರಾಜಕೀಯ ರಂಗಕ್ಕೆ ಸೋನಿಯಾ ಗಾಂಧಿ ಕಾಲಿರಿಸಿ ಇಂದಿಗೆ ಹತ್ತು ವರ್ಷ ಸಂದಿರುವ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಉದ್ಘಾಟನೆ ಕಾಂಗ್ರೆಸ್ ಪಕ್ಷದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದ್ದರೂ ಈ ವಿವಾದದಿಂದಾಗಿ ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಇರುಸುಮುರುಸು ಉಂಟು ಮಾಡಿದೆ.
ರಾಜೀವ್ ಗಾಂಧಿ ಬದಲು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಅವರ ಹೆಸರನ್ನು ಇಡಬೇಕೆಂದು ತೆಲುಗು ದೇಶಂ ಪಕ್ಷ ಪಟ್ಟುಹಿಡಿದಿದೆ. ಉದ್ಘಾಟನೆಗೆ ಅಡ್ಡಿಪಡಿಸಿದ 20ಕ್ಕೂ ಹೆಚ್ಚಿನ ತೆಲುಗು ದೇಶಂ ವಿಧಾನಸಭಾ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಉದ್ವಿಗ್ನ ಪರಿಸ್ಥಿತಿ ತಲೆದೋರಿರುವುದರಿಂದ ನಿಲ್ದಾಣದ ಪ್ರದೇಶದಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಈಗ ರಾಜೀವ್ ಗಾಂಧಿ ಹೆಸರಿಡಲಾಗಿದ್ದರೂ ಮುಂದೊಂದು ದಿನ ತೆಲುಗು ದೇಶಂ ಅಧಿಕಾರಕ್ಕೆ ಬಂದಾಗ ಎನ್.ಟಿ.ರಾಮರಾವ್ ಹೆಸರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮರುನಾಮಕರಣ ಮಾಡುವುದಾಗಿ ಪಕ್ಷದ ಸದಸ್ಯರು ಪಣ ತೊಟ್ಟಿದ್ದಾರೆ.
(ದಟ್ಸ್ಕನ್ನಡ ವಾರ್ತೆ)