ಮಂಗಳೂರಿನಲ್ಲಿ ಮನೋಹರ್ ಆಚಾರ್ಯ ಲಿಪಿ ಪ್ರದರ್ಶನ
ಮಂಗಳೂರು, ಮಾ. 12 : ಕನ್ನಡದ ಅಕ್ಷರಗಳು ತುಂಬ ಮುದ್ದು ಮುದ್ದು. ಅದು ಒಬ್ಬ ಪಳಗಿದ ಚಿತ್ರಕಾರನ ಕೈನಲ್ಲಿ ಸಿಕ್ಕಿದರೆ ಅದರ ಚಂದ ಹೇಗಿರಬಹುದು? ಅದನ್ನು ನೊಡಲು ನಿಮಗೆ ಒಂದು ಅವಕಾಶ. ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಮಾರ್ಚ್ 14 ರಿಂದ 18ರವರೆಗೆ ಕಲಾವಿದ ಮನೋಹರ್ ಆಚಾರ್ಯ ಅವರ ಕಲಾ ಪ್ರದರ್ಶನ "ಚಂದದ ಕನ್ನಡ" ಏರ್ಪಾಟಾಗಿದೆ. ಮನೋಹರ್ ಅವರು ಪ್ರಜಾವಾಣಿ ಬಳಗದ ಚಿರಪರಿಚಿತ ಕಲಾವಿದ. ಕರ್ನಾಟಕದಲ್ಲಿ ಇದೇ ಮೊದಲಬಾರಿಗೆ ಕ್ಯಾಲಿಗ್ರಫಿ ಮತ್ತು ಟೈಫೊಗ್ರಫಿ ಕಲಾ ಪ್ರದರ್ಶನದ ಪ್ರಯೋಗವನ್ನು ಮನೋಹರ್ ಅವರು ಅವರ ಎಂಎಝಡ್ ಅವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದಾರೆ.
ಪ್ರದರ್ಶನದ ಉದ್ಘಾಟನೆಯನ್ನು ಆಳ್ವಾ ಫೌಂಡೇಶನ್ನಿನ ಡಾ|| ಮೊಹನ್ ಆಳ್ವ ನಡೆಸಿಕೊಡಲಿದ್ದಾರೆ. 14ರ ಸಂಜೆ 4.30 ಗೆ ಉದ್ಘಾಟನೆಯಾಗುವ ಈ ಪ್ರದರ್ಶನಕ್ಕೆ ಕನ್ನಡ ಲಿಪಿ ಪ್ರಿಯರಿಗೆ ಆದರದ ಸ್ವಾಗತ.
ಕನ್ನಡದಲ್ಲಿ ಲಿಪಿಶಾಸ್ತ್ರ ಕುರಿತ ಅಧ್ಯಯನ ನಡೆದಿರುವುದು ಕಡಿಮೆ. ಲಾಗಾಯ್ತಿನಿಂದಲೂ ನೋಡಿದ್ದೇ ಲಿಪಿ ನೋಡಿ ಅನೇಕರಿಗೆ ಬೋರ್ ಆಗಿದೆ. ಇಂಗ್ಲಿಷ್ನಲ್ಲಿರುವಂತೆ Times New Romans, Bookman Old Style, Lucidas,Trebuchets ಮುಂತಾದ ಲಿಪಿ ವೈವಿದ್ಯ ನಮ್ಮ ಕನ್ನಡ ಅಕ್ಷರಗಳಿಗೂ ಬರಬಾರದೆ ಎಂದು ಆಶಿಸುವವರಿಗೆ ಕೊರತೆಯಿಲ್ಲ. ಪ್ರಜಾವಾಣಿ ಪತ್ರಿಕೆಯಲ್ಲಿ ತುಂಬ ಹಿಂದೆ ಹಿರಿಯ ಕಲಾವಿದ ರಮೇಶ್ ಲಿಪಿ ವೈವಿಧ್ಯಕ್ಕೆ ಹೆಸರಾಗಿದ್ದರು. ಅವರ ಗರಡಿಯಲ್ಲೇ ಪಳಗಿದ ಮನೋಹರ್ ಅವರು ಸುಮಾರು 25 ವರ್ಷಗಳಿಂದ ಕನ್ನಡ ಲಿಪಿಗೆ ನಾನಾ ರೂಪ ವೇಷ ತೊಡಿಸಿ, ನೋಡಿ, ನೋಡಿಸಿ ಸುಖಿಸಿದ್ದಾರೆ. ಆ ಲಿಪಿ ರೂಪಗಳು ದಿನಬಳಕೆಗೆ ಬಂದರೆ ಬರಹ, ಶ್ರೀಲಿಪಿ, ಮೈಕ್ರೋಸಾಫ್ಟ್ ನ ತುಂಗಾ ಮುಂತಾದ ಫಾಂಟುಗಳಿಗೆ ಜತೆಗಾರ ಸಿಕ್ಕಂತಾಗುತ್ತದೆ.
(ದಟ್ಸ್ ಕನ್ನಡ ವಾರ್ತೆ)