ರಾಜ್ಯದ ಅರಣ್ಯಗಳಲ್ಲಿ ಅಗ್ನಿದೇವನ ರುದ್ರನರ್ತನ
ಶಿವಮೊಗ್ಗ, ಮಾ 9: ಇಲ್ಲಿನ ಕುವೆಂಪು ವಿಶ್ವವಿದ್ಯಾಲಯದ ಉದ್ಯಾನಕ್ಕೆ ಹಬ್ಬಿದ ಕಾಡ್ಗಿಚ್ಚಿಗೆಅಲ್ಲಿನ ಜತ್ರೋಪವನ, ಹಣ್ಣಿನ ವನಗಳು ಆಹುತಿಯಾಗಿದೆ. ಸುಮಾರು15 ರಿಂದ 20ಎಕರೆ ಪ್ರದೇಶ ಈಗಾಗಲೇ ಬೆಂಕಿಗೆ ಆಹುತಿಯಾಗಿದೆ. ಜ್ಞಾನ, ವಿಜ್ಞಾನ ಹಾಗೂ ಧ್ಯಾನವನಗಳು ನಾಶವಾಗಿವೆ. ನಾಗರಹೊಳೆ ಅಭಯಾರಣ್ಯದ ಕಡೆಯಿಂದ ಹಬ್ಬಿದಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ವ್ಯಾಪಿಸುತ್ತಿದೆ.
ಬೆಂಕಿನಂದಿಸಲು ಹತ್ತಿರದ ಭದ್ರಾವತಿ ಹಾಗೂ ಶಿವಮೊಗ್ಗದಿಂದ ಅಗ್ನಿಶಾಮಕ ದಳ ಬರಲು ವಿಳಂಬವಾಗಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಉದ್ಯಾನದಲ್ಲಿ ಬೆಂಕಿಯನ್ನು ನಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಅಗ್ನಿ ನರ್ತನ
ಕಳೆದ ಎರಡು ದಿನಗಳಿಂದ ಕೊಡಗಿನ ವೀರಾಜಪೇಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮತ್ತಿಗೋಡು ವನ್ಯಜೀವಿ ವಲಯದ ಅರಿಕೆರೆ ಅರಣ್ಯ ವಲಯ ಸೇರಿದಂತೆ ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ. ಕಾಳ್ಗಿಚ್ಚಿನಜ್ವಾಲೆಗೆ ಬೆಲೆ ಬಾಳುವ ತೇಗ, ಬೀಟೆ, ಮತ್ತಿ, ಹೊನ್ನೆ, ಸೇರಿದಂತೆ ನೂರಾರು ಮರಗಳು ನೆಲಕ್ಕುರುಳುತ್ತಿವೆ.
ಕುಶಾಲನಗರ ಬಳಿಯ ಆನೆಕಾಡು, ಚೆಟ್ಟಳ್ಳಿ ಬಳಿಯ ಕೇಂದ್ರಿಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಉದ್ಯಾನ, ನಾಪೋಕ್ಲು ವ್ಯಾಪ್ತಿಯ ಕಾಫಿತೋಟಗಳು, ತಿತಿಮತಿ ಬಳಿಯ ಆನೆಚೌಕರಿ ಅರಣ್ಯ ಪ್ರದೇಶ,ಸೋಮವಾರಪೇಟೆ ಸಮೀಪದ ಬಾಣವಾರದ ಯರಪಾರೆಯಲ್ಲಿ ಅರಣ್ಯಕ್ಕೆ ಬೆಂಕಿ ತಗುಲಿದೆ. ಇದಲ್ಲದೆ ಮಡಿಕೇರಿಯ ಖಾಸಗಿ ಬಸ್ ನಿಲ್ದಾಣ, ಭಗವತಿ ನಗರದ ಕುರುಚಲು ಕಾಡಿಗೆ ಬೆಂಕಿ ಬಿದ್ದ ಪರಿಣಾಮ ನಾಗರೀಕರು ಆತಂಕಗೊಂಡಿದ್ದರು. ಅಗ್ನಿ ಶಾಮಕದಳ ನಗರದಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಕೇಂದ್ರದ ಪರಿಹಾರ: ಎರಡು ವರ್ಷಗಳ ಕೆಳಗೆ ಪ್ರಕೃತಿ ವಿಕೋಪದಿಂದ ಹಾಳಾದ ಮೂಲಭೂತ ಸೌಲಭ್ಯಗಳನ್ನು ಸರಿಹೊಂದಿಸಲು ರಾಜ್ಯ ಸರ್ಕಾರ 1,447 ಕೋಟಿ ರು ಕೇಳಿತ್ತು. ಇದಕ್ಕೆ ತಡವಾಗಿಯಾದರೂ ಸ್ಪಂದಿಸಿದ ಕೇಂದ್ರ ಸರ್ಕಾರಕರ್ನಾಟಕ ಸೇರಿದಂತೆ ಒಂಭತ್ತು ರಾಜ್ಯಗಳಿಗೆ ನೆರವು ನೀಡಿಕೆಗೆ ಒಪ್ಪಿಗೆ ಸೂಚಿಸಿದೆ. ಇದರಂತೆ ರಾಜ್ಯಕ್ಕೆ 769 ಕೋಟಿ ರು ಹೆಚ್ಚುವರಿ ನೆರವು ದೊರೆಯುವ ಸಾಧ್ಯತೆಯಿದೆ ಎಂದು ಕೇಂದ್ರ ವಾರ್ತಾ ಸಚಿವ ಪ್ರಿಯರಂಜನ್ ದಾಸ್ ಮುನ್ಷಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
(ದಟ್ಸ್ಕನ್ನಡ ವಾರ್ತೆ)