ರೌಡಿಗಳ ಬೆಂಡೆತ್ತಲು ಬದ್ಧ :ನೀಲಂ ಅಚ್ಯತರಾವ್
ಬೆಂಗಳೂರು, ಫೆ.27: ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ಅಪರಾಧ ಪ್ರಕರಣಗಳು ನಗರದಲ್ಲಿ ದುಪ್ಪಟ್ಟಾಗಿದ್ದು ನಾಗರಿಕರಿಗೆ ಕಳವಳ ಉಂಟಾಗಿದೆ. ಅಣಬೆಗಳಂತೆ ಹುಟ್ಟಿಕೊಳ್ಳುತ್ತಿರುವ ರೌಡಿಗಳನ್ನು ಮಟ್ಟ ಹಾಕಲಾಗುವುದು, ರೌಡಿ ಚಟುವಟಿಕೆಗಳನ್ನು ಬೇರು ಸಮೇತ ಕಿತ್ತೊಗೆಯಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ನೀಲಂ ಅಚ್ಯುತರಾವ್ ಇಂದು ಜನತೆಗೆ ಭರವಸೆ ನೀಡಿದ್ದಾರೆ.
ಹಿರಿಯ ರೌಡಿಗಳು ಹೋದ ನಂತರ ಮರಿ ರೌಡಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ನಂತರ ಅವರು ಹಿರಿಯ ರೌಡಿಗಳಾಗಿ ಚಲಾವಣೆ ಆಗುತ್ತಿದ್ದಾರೆ. ಈಗಾಗಲೇ ರೌಡಿಗಳೆಂದು ಗುರುತಿಸಿರುವ ವ್ಯಕ್ತಿಗಳಿಂದ ಪ್ರತಿ ನಿತ್ಯ ಸಹಿ ಮಾಡಿಸಿಕೊಳ್ಳಲಾಗುತ್ತಿದೆ. ಅವರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ರೌಡಿ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ. ಇದಕ್ಕೆ ಕಡಿವಾಣ ಹಾಕುವುದಾಗಿ ನೀಲಂ ಅಚ್ಯುತರಾವ್ ಬುಧವಾರ ತಿಳಿಸಿದರು.
ರೌಡಿ ಚಟುವಟಿಕೆಗಳಲ್ಲಿ ನಿರತರಾದವರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಶೀಘ್ರವೇ ಅವರನ್ನು ಬಂಧಿಸುತ್ತೇವೆ. ನಗರದೆಲ್ಲೆಡೆ ರೌಡಿಗಳ ಸಂಖ್ಯೆ ಹೆಚ್ಚುತ್ತಿದೆ. ಸಿಸಿಬಿ ಪೊಲೀಸರು ಸೇರಿದಂತೆ ನಗರ ಪೊಲೀಸರು ರೌಡಿ ಚಟುವಟಿಕೆಗೆ ಕಡಿವಾಣ ಹಾಕಲು ಶ್ರಮಿಸುತ್ತಿದ್ದಾರೆ. ತಲೆ ಮರೆಸಿಕೊಂಡಿರುವ ರೌಡಿಗಳನ್ನು ಬಂಧಿಸುವತ್ತ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಅವರು ಹೇಳಿದರು.
ಇಂದು ಸಿಸಿಬಿ ಪೊಲೀಸರು ಕೊರಂಗು ಗ್ಯಾಂಗ್ನ ಕುಖ್ಯಾತ ರೌಡಿ ಜಗ್ಗ ಅಲಿಯಾಸ್ ಮಾರೇನಹಳ್ಳಿ ಜಗ್ಗ ಮತ್ತು ಆತನ ಗುಂಪಿಗೆ ಸೇರಿದ ಆರು ಜನ ರೌಡಿಗಳನ್ನು ಬಂಧಿಸಿ ಅವರಿಂದ ರಿವಾಲ್ವರ್, ಗುಂಡುಗಳು, ಮಚ್ಚು, ಲಾಂಗುಗಳನ್ನು ವಶಪಡಿಸಿಕೊಂಡಿದ್ದಾರೆ. ರೌಡಿ ಜಗ್ಗನ ಸಹಚರರಾದ ನಾಗೇಶ ಅಲಿಯಾಸ್ ಬೆಟ್ಟ, ಕೆ.ಆರ್.ಎಸ್.ಸಂತೋಷ್ ಕುಮಾರ್, ಲಕ್ಷ್ಮೀಶ, ಗಣೇಶ, ಮುರುಗೇಶ ಮತ್ತು ಗಜೇಂದ್ರ ಬಂಧಿತ ರೌಡಿಗಳು. ಹಾಗೆಯೇ, ಮತ್ತಷ್ಟು ರೌಡಿಗಳನ್ನು ಶೀಘ್ರದಲ್ಲೆ ಬಂಧಿಸಲಾಗುವುದುದೆಂದು ನೀಲಂ ಅಚ್ಯುತರಾವ್ ತಿಳಿಸಿದರು.
(ದಟ್ಸ್ಕನ್ನಡ ವಾರ್ತೆ)