ರಾಜ್ಯದಲ್ಲಿ ಮೇ.28ರ ಒಳಗೆ ವಿಧಾನಸಭೆ ಚುನಾವಣೆ?
ಬೆಂಗಳೂರು, ಫೆ.27: ಕರ್ನಾಟಕದಲ್ಲಿ ಶೀಘ್ರದಲ್ಲೇ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ರಾಜ್ಯದಲ್ಲಿ ಮೇ.28ಕ್ಕೆ ರಾಷ್ಟ್ರಪತಿ ಆಳ್ವಿಕೆ ಕೊನೆಗೊಳ್ಳಲಿದ್ದು ಅದಕ್ಕೂ ಮುನ್ನವೇ ವಿಧಾನಸಭೆ ಚುನಾವಣೆ ನಡೆಸಲು ಸಿದ್ಧತೆ ನಡೆದಿದೆ. ಈ ಬಗ್ಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಹಿನ್ನಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಅವರೊಂದಿಗೆ ಚುನಾವಣಾ ಆಯುಕ್ತರಾದ ನವೀನ್ ಚಾವ್ಲಾ ಹಾಗೂ ಡಾ. ಎಸ್.ವೈ.ಖುರೇಶಿ ಮಾ.4ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ವಿವಿಧ ರಾಜಕೀಯ ಮುಖಂಡರು, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚುನಾವಣೆ ನಡೆಸುವ ಸಂಬಂಧ ಚರ್ಚೆ ನಡೆಸಲಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಚುನಾವಣಾ ಕ್ಷೇತ್ರಗಳ ಪುನರ್ವಿಂಗಡಣೆಯಾಗಿದ್ದರೂ ಅವಧಿ ಪೂರ್ಣಗೊಳ್ಳವ ಮುಂಚೆಯೇ ಚುನಾವಣೆಗಳನ್ನು ನಡೆಸುವುದಾಗಿ ಮೂಲಗಳು ತಿಳಿಸಿವೆ. ಸರ್ವೋಚ್ಚ ನ್ಯಾಯಾಲದ ಪ್ರಕಾರ ಚುನಾವಣೆಗಳನ್ನು ನೈಸರ್ಗಿಕ ವಿಕೋಪಗಳನ್ನು ಹೊರತುಪಡಿಸಿ ಆರು ತಿಂಗಳಿಗಿಂತ ಅಧಿಕ ಅವಧಿಯವರೆಗೆ ಮುಂದೂಡುವಂತಿಲ್ಲ. ಇತ್ತೀಚೆಗಷ್ಟೇ ರಾಜ್ಯ ಬಿಜೆಪಿ ಮುಖಂಡರ ನಿಯೋಗವೊಂದು ಚುನಾವಣಾ ಆಯೋಗವನ್ನು ಭೇಟಿ ಮಾಡಿ ಮೇ.28ರ ಒಳಗೆ ವಿಧಾನಸಭೆ ಚುನಾವಣೆಗಳನ್ನು ನಡೆಸುವಂತೆ ಮನವಿ ಸಲ್ಲಿಸಿತ್ತು.
(ದಟ್ಸ್ಕನ್ನಡ ವಾರ್ತೆ)