ಸರ್ಕಾರಿ ಜ್ಯೂ. ವೈದ್ಯರುಗಳ ಮುಷ್ಕರದಿಂದ ಜನ ತತ್ತರ
ಬೆಂಗಳೂರು, ಫೆ.24:ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯರುಗಳು ನಡೆಸುತಿರುವ ಮುಷ್ಕರನಾಲ್ಕನೇದಿನಕ್ಕೆ ಕಾಲಿರಿಸಿದ್ದು, ಸರಿಯಾದ ವೈದ್ಯಕೀಯ ಸೌಲಭ್ಯ ದೊರೆಯದೆ ಸಾರ್ವಜನಿಕರು ತೊಂದರೆಗೊಳಗಾಗಿದ್ದಾರೆ.
ಬೌರಿಂಗ್ ಮತ್ತು ಲೇಡಿ ಕರ್ಜನ್ಆಸ್ಪತ್ರೆಯಲ್ಲಿ ಪ್ರಾರಂಭವಾದ ಮುಷ್ಕರ ಈಗ ವಿಕ್ಟೋರಿಯಾ ಆಸ್ಪತ್ರೆಗಳಿಗೂ ಹಬ್ಬಿದೆ.ಪರಿಸ್ಥಿತಿ ಹೀಗೆ ಮುಂದುವರೆದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯರುಗಳು ಮುಷ್ಕರ ಹೂಡಬೇಕಾಗುತ್ತದೆ. ಈಗಾಗಲೇ ಈ ಬಗ್ಗೆ ಜಿಲ್ಲಾವಾರು ಆರೋಗ್ಯ ಕೇಂದ್ರಗಳಲ್ಲಿ ಜಾಗೃತಿ ಮೂಡಿದ್ದು, ಮೈಸ್ಸೂರಿನ ಮೆಡಿಕಲ್ ಕಾಲೇಜ್ ,ಬಳ್ಳಾರಿಯ ವಿಮ್ಸ್ ,ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕಿರಿಯ ವೈದ್ಯರುಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಕಿರಿಯ ವೈದ್ಯರು ಹೇಳಿದರು.
ವೈದ್ಯರ ರಕ್ಷಣೆ ಕುರಿತು ನೆರೆ ರಾಜ್ಯಗಳಲ್ಲಿ ಸೂಕ್ತವಾದ ರಕ್ಷಣಾ ಸೂತ್ರಗಳನ್ನು ಅನುಸರಿಸಲಾಗುತ್ತಿದೆ. ಆ ನಿಯಮಗಳನ್ನು ಇಲ್ಲಿ ಕೂಡ ಜಾರಿಗೆ ತರುವುದು ಅವಶ್ಯ ಎಂದು ಕಿರಿಯ ವೈದ್ಯರ ಸಂಘದವರು ಹೇಳಿದರು. ಸೂಕ್ತ ವೈದ್ಯಕೀಯ ಸೌಲಭ್ಯ ದೊರೆಯದೆ ಸಾರ್ವಜನಿಕರು ಸಿಟ್ಟಿಗೆದ್ದು, ಗಲಾಟೆ ನಡೆಸಿದ ಘಟನೆ ಬೌರಿಂಗ್ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಜರುಗಿತ್ತಾದರೂ, ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ಸುಧಾರಣೆ ಬಂದಿದೆ.
ಮುಷ್ಕರಕ್ಕೆ ಕಾರಣ:ಇತ್ತೀಚೆಗೆ 28 ವರ್ಷದ ಹೇಮಾವತಿ ಎಂಬುವವರು ಹೆರಿಗೆ ನೋವಿನಿಂದ ಬೌರಿಂಗ್ ಆಸ್ಪತ್ರೆಗೆ ಸೇರಿದ್ದರು. ಅಕಸ್ಮಾತಾಗಿ ಮಂಚದಿಂದ ಬಿದ್ದು ನೋವಿನಿಂದ ಮೃತಪಟ್ಟ ಘಟನೆ ನಡೆದಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೋಗಿಯ ಕಡೆಯವರು, ಆಸ್ಪತ್ರೆಯ ಗಾಜುಗಳನ್ನು ಪುಡಿ ಮಾಡಿ, ಸಿಬ್ಬಂದಿಗಳ ಮೇಲೆ ಕಿರಿಯ ವೈದ್ಯರುಗಳ ಮೇಲೆ ಹಲ್ಲೆ ಮಾಡಿದ್ದರು. ಸೂಕ್ತ ರಕ್ಷಣೆ ದೊರೆಯದ ಹೊರತು ಕೆಲಸ ಮಾಡುವುದಿಲ್ಲ ಎಂದು ಹೇಳಿ ಕಿರಿಯ ವೈದ್ಯರುಗಳು ಮುಷ್ಕರಕ್ಕೆ ಮುಂದಾದರು ಎನ್ನಲಾಗಿದೆ.
ಬೌರಿಂಗ್ ಆಸ್ಪತ್ರೆಯಲ್ಲಿ ಪ್ರತಿದಿನ ಬರುವ ಹೊರರೋಗಿಗಳ ಸಂಖ್ಯೆ ಸುಮಾರು 1,500 ಇದ್ದು, ಸುಮಾರು 68 ವೈದ್ಯರುಗಳು ರೋಗಿಗಳನ್ನು ಪರೀಕ್ಷಿಸುವ ವ್ಯವಸ್ಥೆಯಿದೆ. ತುರ್ತು ಸೇವಾ ವಿಭಾಗದಲ್ಲಿ ದಿನಕ್ಕೆ ಸುಮಾರು 50 ಕೇಸುಗಳನ್ನು ದಾಖಲಿಸಲಾಗುತ್ತಿತ್ತು. ಆದರೆ ಈಗ ಕಿರಿಯ ವೈದ್ಯರುಗಳ ಮುಷ್ಕರದಿಂದ ಹಿರಿಯ ವೈದ್ಯರುಗಳು.ಪರಿಸ್ಥಿತಿ ನಿಭಾಯಿಸಲು ಹೆಣಗುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)