ದೇಶದ ಪ್ರತಿಷ್ಠಿತ ಸಾಹಿತ್ಯಕ ಹುದ್ದೆಗೆ ಬಂಗಾಳಿ ಸಾಹಿತಿ
ನವದೆಹಲಿ, ಫೆ.21: ದೇಶದ ಪ್ರತಿಷ್ಠಿತ ಸಾಹಿತ್ಯಕ ಹುದ್ದೆ ಎಂದೇ ಹೆಸರಾದ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಬರಹಗಾರ ಸುನಿಲ್ ಗಂಗೋಪಾಧ್ಯಾಯ್(73) ಆಯ್ಕೆಯಾಗಿದ್ದಾರೆ.
ತೀವ್ರ ಪೈಪೋಟಿಯಿಂದ ಕೂಡಿದ್ದ್ದ ಚುನಾವಣೆಯಲ್ಲಿ ಕೇರಳದ ಖ್ಯಾತ ಸಾಹಿತಿಎಂ.ಟಿ.ವಾಸುದೇನ್ ನಾಯರ್(74) ಅವರನ್ನು ಸೋಲಿಸಿ ಗಂಗೋಪಾಧ್ಯಾಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾದರು. ವಾಸುದೇವನ್ ನಾಯರ್ 40 ಮತಗಳನ್ನು ಪಡೆದರೆ, ಗಂಗೋಪಾಧ್ಯ್ಯಾಯ 45 ಮತಗಳನ್ನು ಪಡೆದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮತ್ತೊಬ್ಬ ಸಾಹಿತಿ ಸತ್ಯವ್ರತ ಶಾಸ್ತ್ರಿ ಕೇವಲ 7 ಮತಗಳನ್ನು ಗಳಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿಯು ವಾರ್ಷಿಕ 8 ಕೋಟಿ ರೂ. ಬಜೆಟ್ ಹೊಂದಿದೆ. ಇಂದು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಸ್ನೇಹದಿಂದ ಕೂಡಿದ ಹೋರಾಟವಾಗಿತ್ತು ಎಂದು ತಮ್ಮ ಆಯ್ಕೆ ಬಗ್ಗೆ ಗಂಗೋಪಾಧ್ಯಾಯ ಪ್ರತಿಕ್ರಿಯಿಸಿದರು.ಅಕಾಡೆಮಿಯ ಹಿಂದಿನ ಅಧ್ಯಕ್ಷ ಗೋಪಿಚಂದ್ ನಾರಂಗ್ ಅವರು ಗಂಗೋಪಾಧ್ಯಾಯ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಗಂಗೋಪಾಧ್ಯಾಯ ಗುಂಪಿನಲ್ಲಿದ್ದ ಪಂಜಾಬಿನ ಎಸ್.ಎಸ್.ನೂರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
(ದಟ್ಸ್ಕನ್ನಡ ವಾರ್ತೆ)