ಮಾಜಿ ಕೇಂದ್ರ ಸಚಿವೆ ಬಸವರಾಜೇಶ್ವರಿ ವಿಧಿವಶ
ಬಳ್ಳಾರಿ, ಫೆ.19 : ಕೇಂದ್ರದ ಮಾಜಿ ಸಚಿವೆ ಮತ್ತು ಮಾಜಿ ಲೋಕಸಭಾ ಸದಸ್ಯೆ ಬಸವರಾಜೇಶ್ವರಿಯವರು ದೀರ್ಘಕಾಲದ ಅಸ್ವಸ್ಥತೆಯಿಂದ ನಿಧನ ಹೊಂದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಬಸವರಾಜೇಶ್ವರಿ ನಾಲ್ವರು ಪುತ್ರರು ಮತ್ತು ನಾಲ್ವರು ಪುತ್ರಿಯರನ್ನು ಆಗಲಿದ್ದಾರೆ.
ಲಿಂಗಾಯತ ಧರ್ಮದ ಪ್ರಭಾವಿ ನಾಯಕಿಯಾಗಿದ್ದ ಇವರು ನಾಲ್ಕು ದಶಕಗಳಿಗೂ ಹೆಚ್ಚು ವರ್ಷಗಳ ಕಾಲ ಕಾಂಗ್ರೆಸ್ ಕಾರ್ಯಕರ್ತೆಯಾಗಿಕಾರ್ಯನಿರ್ವಹಿಸಿದ್ದರು. ಪಿ.ವಿ.ನರಸಿಂಹರಾವ್ ಅವರ ಮಂತ್ರಿಮಂಡಲದಲ್ಲಿ 1993ರಿಂದ 1996ರವರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಇವರು 2004ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಯನ್ನು ಸೇರಿದ್ದರು.
ಮೂರು ಬಾರಿ ಬಳ್ಳಾರಿಯಿಂದ ಲೋಕಸಭೆಗೆ ಚುನಾಯಿತರಾಗಿದ್ದಲ್ಲದೇ 1977ರಿಂದ 84ರವರೆಗೆ ರಾಯಚೂರಿನ ಮಾನ್ವಿ ಕ್ಷೇತ್ರದಿಂದ ಮೂರು ಬಾರಿ ವಿಧಾನ ಸಭೆಗೆ ಮತ್ತು ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾಗಿದ್ದರು. ಬಸವರಾಜೇಶ್ವರಿ ರಾಜ್ಯ ವಿಧಾನಸಭೆಯ ಉಪಾಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದರು.
ಸುಮಾರು ಒಂದು ವರ್ಷದಿಂದ ಅಸ್ವಸ್ಥರಾಗಿದ್ದ ಇವರು ತಮ್ಮ ಪುತ್ರನ ಬಿಎಂಸಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದರು. ಶವ ಸಂಸ್ಕಾರವನ್ನು ರಾಯಚೂರಿನ ಸಮೀಪದ ಗೆಜ್ಜಲ ಘಟ್ಟದಲ್ಲಿ ನಡೆಸಲಾಗುವುದು ಎಂದು ಕುಟುಂಬದವರು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)