ರಾಜ್ ಠಾಕ್ರೆ ನಿಲುವಿಗೆ ಚಂಪಾ ತಾತ್ವಿಕ ಬೆಂಬಲ
ಬೆಂಗಳೂರು,ಫೆ.19: ಮಹಾರಾಷ್ಟ್ರದಲ್ಲಿ ಮೂಲನಿವಾಸಿಗಳಿಗಾಗುತ್ತಿರುವ ಅನ್ಯಾಯವನ್ನು ಖಂಡಿಸಿ ವಲಸಿಗರನ್ನು ಅದರಲ್ಲಿಯೂ ಉತ್ತರಪ್ರದೇಶ ಮತ್ತು ಬಿಹಾರಿಗಳ ವಿರುದ್ಧ ಕಿಡಿಕಾಯ್ದು ವಿವಾದ ಸೃಷ್ಟ್ಟಿಸಿದ್ದ ರಾಜ್ ಠಾಕ್ರೆ ಯನ್ನು ತಾತ್ವಿಕವಾಗಿ ಬೆಂಬಲಿಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದರು.ನಗರದ ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತ ಈ ವಿಷಯವನ್ನು ಚಂಪಾ ಸುದ್ದಿಗಾರರರಿಗೆ ತಿಳಿಸಿದರು.
ಧ್ಯೇಯೋದ್ದೇಶಕ್ಕೆ ರಾಜ್ ಠಾಕ್ರೆ ಆಯ್ದುಕೊಂಡ ಮಾರ್ಗವು ಸರಿಯಿಲ್ಲದಿದ್ದರೂ ಮೂಲನಿವಾಸಿಗಳ ಪರ ಧ್ವನಿಯೆತ್ತಿರುವುದು ಶ್ಲಾಘನೀಯ ರಾಜ್ಯದಲ್ಲಿಯೂ ಸಹ ಆ ಮಾದರಿಯಲ್ಲೇ ಚಳುವಳಿಯನ್ನು ನಡೆಸಲಾಗುವುದು ಇದರ ಬಗ್ಗೆ ಈಗಾಗಲೇ ಕನ್ನಡ ಪರ ಸಂಘಟನೆಗಳ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿದೆ .ನೆರೆ ರಾಜ್ಯಗಳ ಜನರು ಇಲ್ಲಿಗೆ ಬರುವುದಲ್ಲದೇ ನಮ್ಮ ರಾಜ್ಯದ ಮೂಲ ನಿವಾಸಿಗಳ ವಿರುದ್ಧ ದಬ್ಬಾಳಿಕೆ ನಡೆಸುವುದಾದರೆ ಅದಕ್ಕೆ ಸೂಕ್ತ ರೀತಿಯಲ್ಲಿ ಪಾಠಕಲಿಸಬೇಕಾಗುತ್ತದೆ ಎಂದು ಚಂಪಾ ಹೇಳಿದರು.
ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಬಗ್ಗೆ ಸ್ವಮೌಲ್ಯಮಾಪನ ಮಾಡಿಕೊಂಡು ನನ್ನ ಕಾರ್ಯಾಡಳಿತ ವೈಖರಿಗೆ 100 ಕ್ಕೆ 70 ಅಂಕಗಳನ್ನು ಕೊಟ್ಟುಕೊಳ್ಳುತ್ತೇನೆ ಹೆಚ್ಚು ಅಂಕಗಳನ್ನು ಹಾಕಿಕೊಳ್ಳಲು ಮನಸ್ಸು ಬರುವುದಿಲ್ಲ ತಾವು ಅಧಿಕಾರವಹಿಸಿಕೊಂಡಮೇಲೆ ಕನ್ನಡ ಸಾಹಿತ್ಯ ಪರಿಷತ್ ಅಜೀವ ಸದಸ್ಯರ ಸಂಖ್ಯೆ 30,000 ಕ್ಕೆ ಏರಿದೆ ಮತ್ತು ಅಧಿಕಾರವಧಿಯಲ್ಲಿ ಮೂರು ಸಾಹಿತ್ಯ ಸಮ್ಮೇಳನ,ಮಾತೃಭಾಷಾ ಆಂದೋಲನಕ್ಕೆ ಚಾಲನೆ,ಅಧಿಕ ದತ್ತಿ ಸಂಗ್ರಹಣೆ ,ಪುಸ್ತಕ ಸಂತೆ ಇವುಗಳೆಲ್ಲವು ನನ್ನ ಸಾಧನೆಯ ಪಟ್ಟಿ. 72 ಕನ್ನಡ ಸಾಹಿತ್ಯ ಸಮೇಳನಗಳಾದರು ಒಬ್ಬರು ಅಲ್ಪಸಂಖ್ಯಾತ ಸಾಹಿತಿಯೊಬ್ಬರು ಅಧ್ಯಕ್ಷರಾಗಿರಲಿಲ್ಲ ಕವಿ ನಿಸಾರ್ ಅಹಮದ್ ರನ್ನು ಶಿವಮೊಗ್ಗ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದನ್ನು ಸಹ ನನ್ನ ಸಾಧನೆಯ ಪಟ್ಟಿಗೆ ಸೇರಿಸುತ್ತೇನೆ ಎಂದು ಅಭಿಪ್ರ್ತಾಯ ಪಟ್ಟರು.
ಆದರೆ ಕನ್ನಡೇತರ ಸಾಹಿತಿಯೊಬ್ಬರಿಂದ ಸಮ್ಮೇಳನವನ್ನು ಉದ್ಘಾಟಿಸಬೇಕು ಎಂಬ ಅಭಿಲಾಷೆಯಿತ್ತು ಸಾಹಿತಿಗಳ ಮತ್ತು ಸಮಿತಿಯ ಸದಸ್ಯರ ವಿರೋಧದಿಂದ ಅದು ಈಡೇರಲಿಲ್ಲ ಹಾಗು ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪರಿಷತ್ ವತಿಯಿಂದ ನಿಘಂಟು ರೂಪಿಸುವ ಯೋಜನೆಯು ಸಾಕಾರಗೊಳ್ಳಲಿಲ್ಲ ಎಂದು ತಿಳಿಸಿದರು. ಮಾರ್ಚ್ ಅಂತ್ಯಕ್ಕೆ ಚಂದ್ರಶೇಖರ ಪಾಟೀಲ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ.
(ದಟ್ಸ್ ಕನ್ನಡವಾರ್ತೆ)