ರಾಜ್ಯಪಾಲರ ಎತ್ತಂಗಡಿ ಕೇವಲ ವದಂತಿ: ಕಾಂಗ್ರೆಸ್
ಬೆಂಗಳೂರು, ಫೆ.13: ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಎತ್ತಂಗಡಿ ಮಾಡಲಿದೆ. ಹೊಸ ರಾಜ್ಯಪಾಲರ ಸ್ಥಾನಕ್ಕೆ ಆಂಧ್ರ ಪ್ರದೇಶದ ಇಬ್ಬರು ರಾಜಕಾರಣಿಗಳ ಹೆಸರುಗಳು ಕೇಳಿಬರುತ್ತಿದೆ.
ರಾಜ್ಯ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ಪಿ.ಬಿ.ಮಹಿಷಿ ಅವರನ್ನು ಎತ್ತಂಗಡಿ ಮಾಡಿದ್ದು. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ವಿಳಂಬ ಧೋರಣೆ. ವಿಜಾಪುರ ಮಹಿಳಾ ವಿವಿ ಸಿಂಡಿಕೇಟ್ಗೆ ಆಂಧ್ರದ ಶಾಸಕಿ ರಾಜಲಕ್ಷ್ಮಿಯನ್ನು ನೇಮಕ ಮಾಡಿದಂತಹ ವಿವಾದಾತ್ಮಕ ನಿರ್ಣಯಗಳನ್ನು ಕೈಗೊಂಡ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದ್ದಾರೆ. ಆಂಧ್ರ ವಿಧಾನಸಭೆಯ ಉಪಾಧ್ಯಕ್ಷೆ ಗುಮ್ಮಡಿ ಕುತೂಹಲಮ್ಮ ಅಥವಾ ಅದೇ ರಾಜ್ಯದ ಪ್ರಮುಖ ರಾಜಕಾರಣಿ, ಕೇಂದ್ರದ ಮಾಜಿ ಸಚಿವ ಸತ್ಯನಾರಾಯಣರಾವ್ ಹೊಸ ರಾಜ್ಯಪಾಲರಾಗಿ ಆಯ್ಕೆಯಾಗುವ ಸಂಭವವಿದೆ.
ರಾಮೇಶ್ವರ್ ಠಾಕೂರ್ ಕಾರ್ಯವೈಖರಿ ಬಗ್ಗೆ ಬೇಸತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರು ಅವರನ್ನು ಎತ್ತಂಗಡಿ ಮಾಡಲು ಹೈಕಮಾಂಡ್ಗೆ ದೂರು ಕೊಟ್ಟಿದ್ದಾರೆ. ರಾಜ್ಯಪಾಲರ ಹುದ್ದೆಯಲ್ಲಿ ಅವರು ಮುಂದುವರೆದರೆ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಆಪತ್ತು ಎದುರಾಗಲಿದೆ. ಅವರ ಕಾರ್ಯವೈಖರಿಯನ್ನು ಜನ ಮೆಚ್ಚುತ್ತಿಲ್ಲ. ಅವರ ವರ್ತನೆಯಿಂದ ಬೇರೆ ಪಕ್ಷಗಳಿಗೆ ಲಾಭವಾಗುತ್ತಿದೆ. ನಮ್ಮ ಸಲಹೆ, ಸೂಚನೆಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಕೊಡುತ್ತಿಲ್ಲ ಎಂದು ರಾಜ್ಯ ಉಸ್ತುವಾರಿ ಸಚಿವ ಪೃಥ್ವಿರಾಜ್ ಚವ್ಹಾಣ್ ಕಿವಿಯ ಮೇಲೂ ವಿಷಯವನ್ನು ಹಾಕಿದ್ದಾರೆ.
ಆದರೆ ರಾಜ್ಯ ಕಾಂಗ್ರೆಸ್ನ ಒಂದು ಗುಂಪು ರಾಜ್ಯಪಾಲರ ಎತ್ತಂಗಡಿ ಕೇವಲ ವದಂತಿ ಎನ್ನುತ್ತಿದೆ. ಈಗ ಅವರನ್ನು ಬದಲಾಯಿಸಿದರೆ ಪಕ್ಷಕ್ಕೆ ಮುಖಭಂಗವಾಗುತ್ತದೆ. ಸಾಲದಕ್ಕೆ ರಾಜ್ಯಪಾಲರು ಕಾಂಗ್ರೆಸ್ನ ಕೈಗೊಂಬೆಯಾಗಿದ್ದಾರೆ ಎಂದು ಜೆಡಿಎಸ್, ಬಿಜೆಪಿ ಪಕ್ಷಗಳು ಆರೋಪಿಸುತ್ತಿವೆ. ಹಾಗಾಗಿ ರಾಜ್ಯಪಾಲರನು ಹೈಕಮಾಂಡ್ ಎತ್ತಂಗಡಿ ಮಾಡುವುದಿಲ್ಲ ಎಂಬುದು ಅವರ ವಿವರಣೆ.
(ದಟ್ಸ್ಕನ್ನಡ ವಾರ್ತೆ)