ಮುಂಬೈ: ರಾಜ್ ಠಾಕ್ರೆ ಮತ್ತು ಅಬು ಅಜ್ಮಿ ಬಂಧನ
ಮುಂಬೈ, ಪೆ. 13 : ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಆಪಾದನೆ ಎದುರಿಸುತ್ತಿರುವ ರಾಜ್ ಠಾಕ್ರೆಯನ್ನು ಇಂದು ಮಧ್ಯಾನ್ಹ ಮುಂಬೈ ಪೊಲೀಸರು ಬಂಧಿಸಿದ್ದಾರೆ.ಅವರನ್ನು ಬಂಧಿಸಲಾಗುವುದೆಂಬ ನಿರೀಕ್ಷೆ ಕಳೆದ ಎರಡು ದಿವಸಗಳಿಂದ ಮುಂಬೈ ನಲ್ಲಿ ಎದ್ದು ಕುಣಿಯುತ್ತಿತ್ತು.ರಾಜ್ ಅವರನ್ನು ಅವರ ನಿವಾಸದಲ್ಲಿ ಬಂಧಿಸಲಾಯಿತು ಹಾಗೂ ಪ್ರಚೋದನಕಾರಿ ಭಾಷಣದ ಇನ್ನೊಬ್ಬ ಆಪಾದಿತ, ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಅವರನ್ನು ಅವರ ಕೊಲಾಬ ನಿವಾಸದಲ್ಲಿ ಬಂಧಿಸಲಾಯಿತು.
ಮುಂಬಯಿಯಲ್ಲಿನ ವಲಸಿಗರ ಸಮಸ್ಯೆ ಬಗ್ಗೆ ಈ ಇಬ್ಬರು ನಾಯಕರು ಪರಸ್ಪರ ವಿಭಿನ್ನ ನಿಲುವನ್ನು ತಾಳಿದ್ದಾರೆ.ಉತ್ತರ ಭಾರತೀಯರು ಮುಂಬೈ ಬಿಟ್ಟು ತೊಲಗಬೇಕು ಎನ್ನುವುದು ಸ್ಥಳೀಯ ಮರಾಠಿ ಜನ ಸಮುದಾಯದ ಆಗ್ರಹವಾಗಿದೆ. ಮಹಾರಾಷ್ಟ್ರದ ಮೂಲನಿವಾಸಿಗಳು ಮತ್ತು ಮುಂಬೈಗೆ ವಲಸೆ ಬಂದ ಜನಗಳ ನಡುವೆ ಉದ್ಭವವಾಗಿರುವ ತಿಕ್ಕಾಟ ತಾರಕಕ್ಕೇ ಏರುತ್ತಿದೆ.
"ನಾವು ಜನಕ್ಕೆ ಲಾಠಿಗಳನ್ನು ಹಂಚುತ್ತೇವೆ" ಎಂದು ಅಜ್ಮಿ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಠಾಕ್ರೆ "ಹಾಗಾದ್ರೆ ನಾವು ಕತ್ತಿಗಳನ್ನು ಹಂಚುತ್ತೇವೆ" ಎಂದಿದ್ದರು. ಆ ಎರಡೂ ಹೇಳಿಕೆಗಳು ಉದ್ರೇಕಕಾರಿಯಾಗಿದ್ದು ಸಾರ್ವಜನಿಕ ನೆಮ್ಮದಿಯನ್ನು ಕದಡುತ್ತವೆ ಎಂದು ಆಪಾದಿಸಿ ಮುಂಬೈ ಪೊಲೀಸರು ಇಬ್ಬರ ವಿರುದ್ಧ ದೂರು ದಾಖಲಿಸಿದ್ದರು. ಇಬ್ಬರನ್ನೂ ಬುಧವಾರ ಸಂಜೆ ವಿಕ್ರೋಲಿಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈನಲ್ಲಿ ಸಧ್ಯದ ಪರಿಸ್ಥಿತಿ ಶಾಂತವಾಗಿದೆ ಎಂದೂ ಪೊಲೀಸ್ ಹೇಳಿಕೆ.
(ದಟ್ಸ್ ಕನ್ನಡವಾರ್ತೆ)