ಆದಿಚುಂಚನಗಿರಿಯಲ್ಲಿ ಬಹುಕೋಟಿ ವೆಚ್ಚದ ದೇವಾಲಯ
ಬೆಂಗಳೂರು, ಫೆ.13: ಸುಮಾರು 85ಕೋಟಿ ರೂ.ವೆಚ್ಚದಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಕಾಲಭೈರವೇಶ್ವರ ಸ್ವಾಮಿ ದೇವಾಲಯ ನಿರ್ಮಾಣವಾಗಿದೆ. ಇದು ದಕ್ಷಿಣ ಭಾರತದಲ್ಲೇ ಅತಿ ಸುಂದರವಾದ ದೇವಾಲಯ. ದೇಗುಲದ ಉದ್ಘಾಟನೆ ಹಾಗೂ ಕುಂಭಾಭಿಷೇಕ ಮಹೋತ್ಸವ ಫೆ.17ರಂದು ನಡೆಯಲಿದೆ.
ಕಾಲಭೈರವೇಶ್ವರ ದೇವಾಲಯವನ್ನು ನಿರ್ಮಿಸಲು ಸುದೀರ್ಘ 14 ವರ್ಷಗಳಷ್ಟು ಕಾಲ ಶ್ರಮಿಸ ಬೇಕಾಯಿತು. ದೇವಾಲಯದ ವಿನ್ಯಾಸ ಹಾಗೂ ನಿರ್ಮಾಣ ಕಾರ್ಯದ ಉಸ್ತುವಾರಿಯನ್ನು ತಮಿಳುನಾಡಿನ ಖ್ಯಾತ ಶಿಲ್ಪಿ ಹಾಗೂ ಪದ್ಮಶ್ರೀ ಪುರಸ್ಕೃತ ಮುತ್ತಯ್ಯ ಸ್ಥಪತಿ ವಹಿಸಿಕೊಂಡಿದ್ದರು. 1200 ಶಿಲ್ಪಿಗಳು ದೇವಸ್ಥಾನ ನಿರ್ಮಾಣ ಕಾರ್ಯಕ್ಕಾಗಿ ಶ್ರಮಿಸಿದ್ದಾರೆ ಎಂದು ಆದಿಚುಂಚನಗಿರಿ ಮಠಾಧೀಶ ಶ್ರೀ ಬಾಲಗಂಗಾಧರನಾಥ ಸ್ವಾಮಿಜಿ ತಿಳಿಸಿದರು.
ದೇವಾಲಯ ನಾಲ್ಕು ಗೋಪುರಗಳನ್ನು ಹೊಂದಿದೆ. ಮೂರು ಗೋಪುರಗಳು 57 ಅಡಿ ಎತ್ತರವಿದ್ದರೆ ರಾಜಗೋಪುರ 100 ಅಡಿ ಎತ್ತರವಿದೆ. ದೇವಾಲಯ ದ್ರಾವಿಡ ಶೈಲಿ ಹಾಗೂ ವಿಮಾನ ಗೋಪುರಗಳು ಚೋಳರ ಶೈಲಿಯಲ್ಲಿವೆ. ಗರ್ಭಗುಡಿ ಮುಂದಿರುವ 10.5ಅಡಿ ಎತ್ತರದ ಅಷ್ಟಭೈರವ ವಿಗ್ರಹ. ಸೂಕ್ಷ್ಮ ಕೆತ್ತನೆಯ 172 ಕಂಬಗಳು. ನಿರ್ಮಾಣ ಹಂತದಲ್ಲಿರುವ 23 ಅಡಿ ಎತ್ತರದ ಶಿವಲಿಂಗ ದೇವಸ್ಥಾನದ ಪ್ರಮುಖ ಆಕರ್ಷಣೆ.
ಕುಂಭಾಭಿಷೇಕದ ಅಂಗವಾಗಿ ಫೆ.17ರಿಂದ 28ರವರೆಗೆ ಧರ್ಮಸಭೆ ನಡೆಯಲಿದೆ. ವಿಶ್ವೇಶ ತೀರ್ಥ ಸ್ವಾಮೀಜಿ, ರವಿಶಂಕರ್ ಗುರೂಜಿ, ರಾಘವೇಶ್ವರ ಭಾರತಿ ಸ್ವಾಮೀಜಿ ಧರ್ಮಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
(ದಟ್ಸ್ಕನ್ನಡ ವಾರ್ತೆ)