ತೋಳ್ಪಾಡಿ ಅಸ್ವಸ್ಥ : ಮಹಾಭಾರತ ಉಪನ್ಯಾಸ ರದ್ದು
ಇದೀಗ ಬಂದ ಸುದ್ದಿ : ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಅಸ್ವಸ್ಥರಾಗಿದ್ದಾರೆ. ಅವರನ್ನು ಪುತ್ತೂರಿನ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಇದೀಗ ಅವರು ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದು ಮನೆಯಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ. ಆದ್ದರಿಂದ, ಬೆಂಗಳೂರಿನಲ್ಲಿ ಅಮೃತ ಮಂಥನ ಸಂಸ್ಥೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಮಹಾಭಾರತ ಉಪನ್ಯಾಸ ಕಾರ್ಯಕ್ರಮವನ್ನು ರದ್ದುಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ದಟ್ಸಕನ್ನಡಕ್ಕೆ ತಿಳಿಸಿದ್ದಾರೆ- ಸಂಪಾದಕ
ಬೆಂಗಳೂರು, ಫೆ.11: ಬೆಂಗಳೂರಿನ ಆರ್.ವಿ.ಟೀಚರ್ಸ್ ಕಾಲೇಜು ಸಭಾಂಗಣದಲ್ಲಿ (2ನೇ ಬ್ಲಾಕ್, ಜಯನಗರ)ಫೆ.13ರಿಂದ 17ರವರೆಗೆ ಪ್ರತಿ ದಿನ ಸಂಜೆ 6ರಿಂದ 8ರವರೆಗೆ ಮಹಾಭಾರತ ಕುರಿತು ಲಕ್ಷ್ಮೀಶ ತೋಳ್ಪಾಡಿ ಮಾತನಾಡಲಿದ್ದಾರೆ. ಅವರ ಮಾತಿನ ಮೋಡಿಯಲ್ಲಿ ಉಲ್ಲಸಿತರಾಗಲು ಬೆಂಗಳೂರಿನಲ್ಲೊಂದು ಅಪರೂಪದ ಅವಕಾಶ. ನಾಲಗೆಯ ಮೇಲೆ ಕುರುಕ್ಷೇತ್ರ, ಆಸಕ್ತರು ಭಾಗವಹಿಸಿ ಮಹಾಕಾವ್ಯ ಕುರಿತ ತಮ್ಮ ದಾಹವನ್ನು ತಣಿಸಿಕೊಳ್ಳಬಹುದು.
ಪುತ್ತೂರಿನ ಲಕ್ಷ್ಮೀಶ ತೋಳ್ಪಾಡಿ, ಕರ್ನಾಟಕದ ವಿಶಿಷ್ಟ ನಿಶ್ಚಿಂತ ಚಿಂತಕ. ಸಾಹಿತ್ಯ-ಯಕ್ಷಗಾನ-ಅಧ್ಯಾತ್ಮ-ಕೃಷಿಯಲ್ಲಿ ತೊಡಗಿಕೊಂಡ ಬಹುರೂಪಿ. ಕನ್ನಡ-ಇಂಗ್ಲಿಷ್-ಸಂಸ್ಕೃತಗಳಿಂದ ಸತ್ವವನ್ನು ಹೀರಿಕೊಂಡು ಹರಿಯುತ್ತಿರುವ ಇವರ ಮನಸ್ಸು ಎಲ್ಲವನ್ನೂ ಒಳಗೊಳ್ಳುತ್ತ ಬಂದಿದೆಯೇ ಹೊರತು, ಎಲ್ಲೂ ಕೊಚ್ಚಿಕೊಂಡು ಹೋಗಿಲ್ಲ. ಬರೆಹದ ಬಿಗಿಯನ್ನು ಮಾತಿನಲ್ಲಿ, ಮಾತಿನ ಓಘವನ್ನು ಬರೆಹದಲ್ಲಿ ಸಾಧಿಸಬಲ್ಲ ಇವರು ಒಳ್ಳೆಯ ವಾಗ್ಮಿ ಮತ್ತು ಬರೆಹಗಾರ. ತೋಳ್ಪಾಡಿ ಅವರೆಂದರೆ ಲಂಕೇಶರಿಗೂ ಪ್ರೀತಿ, ಸ್ವಾಮೀಜಿಗಳಿಗೂ ಅಕ್ಕರೆ!
ಮಹಾಭಾರತ ಹೇಗಿದೆ ತೋಳ್ಪಾಡಿಯವರೆ? ಅಂತ ಮೊನ್ನೆ ಕೇಳಿದರೆ ''ಅದು ದ್ರೌಪದಿಯ ಕೆದರಿದ ಕೇಶದಂತೆ ಇದೆ. ಅದನ್ನು ಕಟ್ಟುವುದು ಸುಲಭವಲ್ಲ!'' ಅಂದಿದ್ದರು.
(ದಟ್ಸ್ಕನ್ನಡ ಸಭೆ-ಸಮಾರಂಭ)