'ಸಂಸ್ಕಾರ' ಬದಲಾಯಿಸಲು ಅಧ್ಯಾಪಕರ ಒತ್ತಾಯ
ಮಂಗಳೂರು, ಫೆ.9: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್ ಅನಂತಮೂರ್ತಿ ಅವರ 'ಸಂಸ್ಕಾರ' ಕಾದಂಬರಿಯ ಹಿಂದಿ ಭಾಷಾಂತರ ಪಠ್ಯವನ್ನು ಪದವಿ ವಿದ್ಯಾರ್ಥಿಗಳಿಗೆ ಬೋಧಿಸಲು ಅಧ್ಯಾಪಕರು ವಿರೋಧ ವ್ಯಕ್ತಪಡಿಸಿದ್ದಾರೆ. ಬಿ.ಎಸ್ಸಿ ನಾಲ್ಕನೆ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸಂಸ್ಕಾರ ನಾನ್-ಡಿಟೇಲ್ ಪಠ್ಯ.
ಚಂದ್ರಕಾಂತ ಕುಸನೂರು 'ಸಂಸ್ಕಾರ'ವನ್ನು ಹಿಂದಿ ಭಾಷೆಗೆ ಅನುವಾದ ಮಾಡಿದ್ದರು. ಕಾದಂಬರಿಯಲ್ಲಿರುವ ಕೆಲವೊಂದು ಲೈಂಗಿಕ ವಿವರ ಹಾಗೂ ಘಟನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಲು ಮುಜುಗರವಾಗುತ್ತದೆ. ಅಧ್ಯಾಪಕರಿಗೆ ಪಾಠ ಮಾಡುವುದು ಕಷ್ಟ. ಈ ಪಠ್ಯ ಬದಲಿಸಬೇಕೆಂದು ಹಿಂದಿ ಶಿಕ್ಷಕರ ಸಂಘ ವಿವಿ ಶೈಕ್ಷಣಿಕ ಸಮಿತಿಯನ್ನು ಒತ್ತಾಯಿಸಿದೆ. ಆದರೆ ಸಮಿತಿ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈಪಠ್ಯವನ್ನು ಬದಲಾಯಿಸಬೇಕೆಂದು ಈಗ ವಿವಿಯ ಕುಲಪತಿಗೆ ಮನವಿ ಸಲ್ಲಿಸಲಾಗಿದೆ.
ಸಂಸ್ಕಾರವನ್ನು ತರಗತಿಯಲ್ಲಿ ಪಾಠ ಮಾಡಲು ತಮ್ಮಿಂದ ಸಾಧ್ಯವಿಲ್ಲ. ಕಾದಂಬರಿಯಲ್ಲಿ ಕೆಲವೆಡೆ ಅಶ್ಲೀಲ ಎನಿಸುವ ವಿವರಗಳಿವೆ. ಆದ ಕಾರಣ ಶಿಕ್ಷಕರ ಮನವಿಯನ್ನು ಪರಿಗಣಿಸಲಾಗಿದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಕುಲಪತಿ ಪ್ರೊ.ಕಾವೇರಿಯಪ್ಪ ತಿಳಿಸಿದ್ದಾರೆ. 'ಸಂಸ್ಕಾರ'ವನ್ನು 2006ರ ಜೂನ್ನಲ್ಲಿ ಮಂಗಳೂರು ವಿವಿ ಪದವಿಗೆ ಹಿಂದಿ ಪಠ್ಯವಾಗಿ ಸೇರಿಸಿತ್ತು.
(ದಟ್ಸ್ಕನ್ನಡ ವಾರ್ತೆ)