ಬಿಜೆಪಿ ಸೇರಿದ ಬಸವರಾಜ್ ಬೊಮ್ಮಾಯಿ
ಬೆಂಗಳೂರು, ಫೆ.9: ಜೆಡಿಯು ಮುಖಂಡ ವಿಧಾನ ಪರಿಷತ್ ಸದಸ್ಯ ಬಸವರಾಜ್ ಬೊಮ್ಮಾಯಿ ಹಾಗೂ ಕುಂದಗೋಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಲ್ಲಿಕಾರ್ಜುನ ಎಸ್.ಅಕ್ಕಿ ಶನಿವಾರ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.
ಬಸವರಾಜ್ ಬೊಮ್ಮಾಯಿ ಬಿಜೆಪಿ ಸೇರಿದ್ದು ನಮಗೆ ಭೀಮ ಬಲ ತಂದಿದೆ. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ತನ್ನ ಸ್ವಂತ ಶಕ್ತಿಯಿಂದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಸದಾನಂದ ಗೌಡ ಈ ಸಂದರ್ಭದಲ್ಲಿ ತಿಳಿಸಿದರು.
ಅಧಿಕಾರ ಕೇಂದ್ರಿಕೃತ ರಾಜಕಾರಣಕ್ಕಿಂತ ಜನಕೇಂದ್ರಿಕೃತ ರಾಜಕಾರಣ ಮಾಡಲು, ಜನಪರ ಸರ್ಕಾರ ಅಸ್ತಿತ್ವಕ್ಕೆ ತರಬೇಕೆಂಬ ಮಹತ್ವಾಕಾಂಕ್ಷೆಯಿಂದ ಬಿಜೆಪಿ ಪಕ್ಷ ಸೇರುತ್ತಿದ್ದೇನೆ. ಜನರಿಗೆ ಬೇಕಾಗಿರುವುದು ಜಾತ್ಯಾತೀತ, ಕೋಮುವಾದ ರಾಜಕೀಯವಲ್ಲ ನೆಮ್ಮದಿಯ ಬದುಕು ಎಂದು ಬಸವರಾಜ್ ಬೊಮ್ಮಾಯಿ ಬಿಜೆಪಿ ಸೇರಿದ್ದನ್ನು ಸಮರ್ಥಿಸಿಕೊಂಡರು.
ಸಮಾರಂಭದಲ್ಲಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಂಸದ ಅನಂತಕುಮಾರ್, ಪ್ರಹ್ಲಾದ್ ಜೋಷಿ, ಮಾಜಿ ಸಚಿವರಾದ ಜಗದೀಶ್ ಶೆಟ್ಟರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಆರ್.ಅಶೋಕ್, ಈಶ್ವರಪ್ಪ, ವಿಜಯ ಸಂಕೇಶ್ವರ್, ಜಿ.ಟಿ.ದೇವೇಗೌಡ, ತಿಪ್ಪೇಸ್ವಾಮಿ ಮುಂತಾದವರು ಭಾಗವಹಿಸಿದ್ದರು.
(ದಟ್ಸ್ಕನ್ನಡ ವಾರ್ತೆ)