ಶಬರಿಮಲೆಗೆ ಮಹಿಳೆಯರ ಪ್ರವೇಶ: ಬಿಜೆಪಿ ವಿರೋಧ
ತಿರುವನಂತಪುರ, ಫೆ.8: ಮಹಿಳೆಯರು ಶಬರಿಮಲೆ ಅಯ್ಯಪ್ಪ ದರ್ಶನ ಪಡೆಯಲು ಅವರಿಗೆ ಪ್ರತ್ಯೇಕ ಅವಧಿ ನಿಗಧಿಪಡಿಸಲು ಕೇರಳ ಸರ್ಕಾರ ಗುರುವಾರ ಪ್ರಸ್ತಾಪಿಸಿದೆ.
10ರಿಂದ 50ವರ್ಷದೊಳಗಿನ ಮಹಿಳೆಯರಿಗೆ ಅಯ್ಯಪ್ಪಸ್ವಾಮಿ ದರ್ಶನ ನಿಷಿದ್ಧ. ಈ ನಿಷೇಧವನ್ನು ಹಿಂಪಡೆಯಬೇಕೆಂದು ಯುವ ವಕೀಲರ ಸಂಘ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಿರುವ ಕೇರಳ ಸರ್ಕಾರ ಶಬರಿಮಲೆ ಅಯ್ಯಪ್ಪನ ದೇವಸ್ಥಾನದಲ್ಲಿ ಲಿಂಗ ತಾರತಮ್ಯಇರಬಾರದು ಎಂದು ಹೇಳಿದೆ.
ದೇವರ ದರ್ಶನ ಪಡೆಯಲು ಸ್ತ್ರೀ-ಪುರುಷರಿಗೆ ಸಮಾನ ಅವಕಾಶ ಕೊಡಬೇಕು. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಲಕ್ಷಾಂತರ ಭಕ್ತರು ಶವರಿಮಲೆಗೆ ಆಗಮಿಸುತ್ತಾರೆ. ಆ ಸಂದರ್ಭದಲ್ಲಿ ಮಹಿಳೆಯರಿಗೆ ಸೌಲಭ್ಯಗಳನ್ನು ಒದಗಿಸಲು ಕಷ್ಟವಾಗುತ್ತದೆ. ಆದಕಾರಣ ಅವರಿಗಾಗಿಯೇ ಪ್ರತ್ಯೇಕವಾದ ಯಾತ್ರಾಋತುವನ್ನು ಏರ್ಪಡಿಸಬೇಕೆಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ. ಆದರೆ ಈ ಸಂಬಂಧ ಶಾಸನ ಜಾರಿಗೊಳಿಸುವ ಉದ್ದೇಶ ತಮಗಿಲ್ಲ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ.
ಬಿಜೆಪಿ ವಿರೋಧ: ಶಬರಿಮಲೆಗೆ ಮಹಿಳೆಯರಿಗಾಗಿ ಪ್ರತ್ಯೇಕ ಯಾತ್ರಾಋತು ಆರಂಭಿಸಿರುವ ಕೇರಳ ಸರ್ಕಾರದ ಪ್ರಸ್ತಾವನೆಯನ್ನು ಬಿಜೆಪಿ ಕೇರಳ ಘಟಕ ತೀವ್ರವಾಗಿ ವಿರೋಧಿಸಿದೆ. ಇದೊಂದು ಏಕಪಕ್ಷೀಯ ಕ್ರಮ. ಇದು ಸ್ವೀಕಾರಾರ್ಹವಲ್ಲ. ಶತಮಾನಗಳಿಂದ ಅನುಸರಿಸಿಕೊಂಡು ಬಂದಿರುವ ಪದ್ಧತಿಗೆ ಅದು ವಿರುದ್ಧವಾಗಿದೆ ಎಂದು ಕೇರಳ ಬಿಜೆಪಿಯ ರಾಜ್ಯಾಧ್ಯಕ್ಷ ಪಿ.ಕೆ.ಕೃಷ್ಣದಾಸ್ ಖಂಡಿಸಿದ್ದಾರೆ. ಇಂತಹ ಸೂಕ್ಷ್ಮ ವಿಚಾರದಲ್ಲಿ ಸಲಹೆ ನೀಡುವ ಮೊದಲು ಸರ್ಕಾರ ಧಾರ್ಮಿಕ ವಿದ್ವಾಂಸರ, ಅರ್ಚಕರ ಮತ್ತು ಹಿಂದು ಸಂಘಟನೆಗಳ ಅಭಿಪ್ರಾಯ ಕೇಳಬೇಕಿತ್ತು ಎಂದು ಅವರು ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.
(ಏಜೆನ್ಸೀಸ್)