ರಾಜಕೀಯ ಲಾಬಿಗೆ ಪಿ.ಬಿ. ಮಹಿಷಿ ಸ್ಥಾನಪಲ್ಲಟ
ಬೆಂಗಳೂರು, ಫೆ.7: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಹ್ಲಾದ್ ಬಿ.ಮಹಿಷಿ ಅವರನ್ನು ಕರ್ನಾಟಕ ವಿದ್ಯುತ್ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಎತ್ತಂಗಡಿ ಮಾಡಲಾಗಿದೆ. ಹಿರಿಯ ಐಎಎಸ್ ಅಧಿಕಾರಿ ಸುಧಾಕರರಾವ್ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.
ಮೂರು ಹಿರಿಯ ಅಧಿಕಾರಿಗಳ ಸೇವಾ ಹಿರಿತನವನ್ನು ಕಡೆಗಣಿಸಿ ಅವರಿಗಿಂತ ಕಿರಿಯರಾದ ಸುಧಾಕರರಾವ್ ಅವರನ್ನು ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಿಸಲಾಗಿದೆ. ಮಹಿಷಿ ಆಯ್ಕೆಯನ್ನು 3 ಹಿರಿಯ ಅಧಿಕಾರಿಗಳು ಪ್ರತಿಭಟಿಸುವ ಸಾಧ್ಯತೆ ಇದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀರಜಾ ರಾಜ್ ಕುಮಾರ್, ಬಿಡಿಎ ಅಧ್ಯಕ್ಷ ದಿಲೀಪ್ ರಾವ್ ಹಾಗೂ ಆರೋಗ್ಯ ಮತ್ತು ಕುಟುಂಬ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಉಷಾಗಣೇಶ್ ಸೇವಾ ಜ್ಯೇಷ್ಠತೆಯಲ್ಲಿ ಸುಧಾಕರ ರಾವ್ ಅವರಿಗಿಂತ ಹಿರಿಯ ಅಧಿಕಾರಿಗಳು. ಮೂಲತಃ ಉಡುಪಿಯವರಾದ ಸುಧಾಕರರಾವ್ ಕನ್ನಡಿಗರು. 1973ರ ಐಎಎಸ್ ತಂಡದವರು.
ಮಹಿಷಿ ಅವರ ಸೇವಾವಧಿ ಇನ್ನೂ ಇರುವಾಗಲೇ ಮತ್ತೊಂದು ಇಲಾಖೆಗೆ ಎತ್ತಂಗಡಿ ಮಾಡುವ ಮೂಲಕ ರಾಜ್ಯಪಾಲರು ಹೊಸ 'ಪರಂಪರೆ'ಗೆ ನಾಂದಿ ಹಾಡಿದ್ದಾರೆ. 2007ರ ಜ.1ರಂದು ಮಹಿಷಿ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಅವರ ಸೇವಾವಧಿ 2009ರ ಮಾ.31ರವರೆಗೂ ಇತ್ತು. ಆದರೆ ರಾಜ್ಯ ಕಾಂಗ್ರೆಸ್ ನಾಯಕರು ನಡೆಸಿದ ಲಾಬಿಗೆ ರಾಜ್ಯಪಾಲರು ಮಣಿದು ಮಹಿಷಿ ಅವರನ್ನು ಎತ್ತಂಗಡಿ ಮಾಡಿದ್ದಾರೆ ಎನ್ನಲಾಗಿದೆ.
(ದಟ್ಸ್ಕನ್ನಡ ವಾರ್ತೆ)