''ಹೇ ರಾಮ್'' ಎಂದದ್ದು ಗಾಂಧಿಯಲ್ಲ ವಂತೆ ರಾಮ ರಾಮ!
ಚೆನ್ನೈ, ಫೆ.7: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ತಮ್ಮ ಸಾವಿಗೂ ಮುಂಚೆ ''ಹೇ ರಾಮ್'' ಎಂದು ಉಚ್ಚರಿಸಿಲ್ಲ. ಬಹಳಷ್ಟು ಜನ ತಿಳಿದಿರುವಂತೆ ನಾಥೂರಾಂ ಗೋಡ್ಸೆ ಗುಂಡು ಹಾರಿಸಿ ಹತ್ಯೆ ಮಾಡಿದಾಗ ಗಾಂಧಿಜಿ ಕೊನೆಯದಾಗಿ ಉಸಿರಿದ್ದು ''ರಾಮ್...ರಾಮ್'' ಅಥವಾ ''ಹೇ ರಾಮ್'' ಅಲ್ಲವೇ ಅಲ್ಲ ಎಂದು ಗಾಂಧಿಜಿ ಸಹಾಯಕರಾಗಿದ್ದ ಕಲ್ಯಾಣಂ ವೆಂಕಿಟರಾಮನ್(85) ಗುರುವಾರ ಚೆನ್ನೈಯಲ್ಲಿ ತಿಳಿಸಿದ್ದಾರೆ.
ಗಾಂಧೀಜಿಅವರ ಮೇಲೆ ನಾಥೂರಾಮ್ ಗೋಡ್ಸೆ ಐದು ಸುತ್ತು ಗುಂಡು ಹಾರಿಸಿದಾಗ ನಾನು ಅರ್ಧ ಮೀಟರ್ ಸನಿಹದಲ್ಲಿದ್ದೆ. ಆ ಕೂಡಲೆ ಕುಸಿದು ಬಿದ್ದ ಗಾಂಧೀಜಿ ಒಂದೇ ಒಂದು ಪದವನ್ನೂ ಉಸುರದೆ ಕಣ್ಮುಚ್ಚಿದರು ಎಂದು ಗಾಂಧೀಜಿ ಹತ್ಯೆಯ ಬಗ್ಗೆ ತುಂಬು ನೋವಿನಿಂದ ಹೇಳಿದರು. ದುರಂತವೆಂದರೆ ಗಾಂಧೀಜಿ ಹತ್ಯೆಯ ಸಂದರ್ಭದಲ್ಲಿ ಅಲ್ಲೇ ಇದ್ದ ಪೊಲೀಸರು ಜನರನ್ನಾಗಲಿ ಅಥವಾ ನಾಥೂರಾಮ್ ಗೂಡ್ಸೆಯನ್ನಾಗಲಿ ತನಿಖೆ ಮಾಡಲಿಲ್ಲ ಎಂದು ಅವರು ತಮ್ಮ ನೆನಪುಗಳನ್ನು ತೆರೆದಿಟ್ಟರು.
ಗಾಂಧೀಜಿ ಅವರು ತಮ್ಮ ಸಾವಿಗೂ ಮುನ್ನ ರಾಮ್... ರಾಮ್ ಎಂದು ಹೇಳಿ ಪ್ರಾಣಬಿಟ್ಟರು ಎಂದು ಯಾರೋ ಎಫ್ಐಆರ್ನಲ್ಲಿ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಸತ್ಯ ಏನೆಂದರೆ ಸಾವಿಗೂ ಮುಂಚೆ ಅವರು ಒಂದೇ ಒಂದು ಪದವನ್ನೂ ಉಚ್ಚರಿಸಿಲ್ಲ. ತೀರಾ ಸನಿಹದಿಂದ ಗಾಂಧಿ ಅವರನ್ನು ಹತ್ಯೆ ಮಾಡಲಾಯಿತು. ಆದರೂ ಈ ರೀತಿಯ ತಪ್ಪು ಮಾಹಿತಿ ಹೇಗೆ ದಾಖಲಾಯಿತು ಎಂದು 1943ರಿಂದ 1948ರವರೆಗೆ ಗಾಂಧಿಜಿ ಅವರ ಸಹಾಯಕರಾಗಿದ್ದ ವೆಂಕಿಟರಾಮನ್ ಆತಂಕ ವ್ಯಕ್ತಪಡಿಸಿದರು. ಗಾಂಧೀಜಿ ಸಾಯಬೇಕಾದರೆ ಅವರ ಮುಖದಲ್ಲಿ ನೋವು, ಹತಾಶೆಗಳು ತುಂಬಿತ್ತು ಎಂದು ವೆಂಕಿಟರಾಮನ್ ತಿಳಿಸಿದರು.
ಆರ್ಎಸ್ಎಸ್ನ ಸದಸ್ಯನಾಗಿದ್ದ ಗೋಡ್ಸೆ ಬಗ್ಗೆ ಕಿಡಿಕಾರಿದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತಪ್ಪು ದಾರಿಗೆ ಎಳೆಯಲು ಇಚ್ಚಿಸದೆ, ಸಾವರ್ಕರ್ ಸಹಾ ಗೋಡ್ಸೆಯನ್ನು ಖಂಡಿಸಿದ್ದಾಗಿ ತಿಳಿಸಿದರು. ಅವರು ಬದುಕಿದ್ದಾಗ ದೇಶದಲ್ಲಿನ ಕೋಮು ಗಲಭೆಗಳು ಅವರ ಮನಸ್ಸನ್ನು ತುಂಬಾ ನೋಯಿಸಿದ್ದವು. ಈ ರೀತಿಯ ತಪ್ಪು ಮಾಹಿತಿಯನ್ನು ದಾಖಲಿಸಿ ಅವರ ಆತ್ಮಕ್ಕೆ ಶಾಂತಿ ಸಿಗದಂತೆ ಗಾಂಧೀಜಿಯನ್ನು ಭ್ರಮನಿರಸನಗೊಳಿಸಿದ್ದಾರೆ ಎಂದು ನೊಂದು ಹೇಳಿದ್ದಾರೆ ವೆಂಕಿಟರಾಮನ್.
(ಏಜೆನ್ಸೀಸ್)