ಅವರ ಆತ್ಮಕಥೆಗೆ ಇನ್ನೂ ಭಾರೀ ಬೇಡಿಕೆ ಇದೆಯೆಂದರೆ
ನವದೆಹಲಿ, ಜ.30: ಮಹಾತ್ಮಾಗಾಂಧಿ ಅಂದು, ಇಂದು, ಎಂದೆಂದಿಗೂ ಪ್ರಸ್ತುತ ಎನ್ನುವುದಕ್ಕೆ ಇಲ್ಲಿದೆ ಪುರಾವೆ. ಅವರ ಹತ್ಯೆಯಾಗಿ 60 ವರ್ಷಗಳೇ ಸರಿದು ಹೋದರೂ ಅವರ ವಿಚಾರಧಾರೆಗಳು ಇಂದಿಗೂ ಮಾಸಿಲ್ಲ ಅನ್ನುವುದಕ್ಕೆ ಅವರ ಆತ್ಮಕತೆ 'ಮೈ ಎಕ್ಸ್ಪೆರಿಮೆಂಟ್ಸ್ ವಿತ್ ಟ್ರೂತ್' ದೇಶಾದ್ಯಂತ ಪ್ರತಿವರ್ಷ 2 ಲಕ್ಷ ಪ್ರತಿಗಳು ಮಾರಾಟವಾಗುತ್ತಿರುವುದೇ ಸಾಕ್ಷಿ.
ಇಂದು ಬುಧವಾರ ಗಾಂಧಿಜಿಯವರ 60ನೇ ಪುಣ್ಯತಿಥಿಯನ್ನು ಆಚರಿಸಲಾಗುತ್ತಿದೆ. ಅಹಿಂಸೆಯ ಮಂತ್ರವನ್ನು ಇಡೀ ವಿಶ್ವಕ್ಕೇ ಉಪದೇಶಿಸಿದ ಮಹಾತ್ಮಾಗಾಂಧಿಯನ್ನು ಜಗತ್ತು ಸದಾ ಸ್ಮರಿಸುತ್ತಲೇ ಇದೆ. ಅವರ ಬಗ್ಗೆ ತಿಳಿದುಕೊಳ್ಳಲು ಅವರ ಆತ್ಮಕತೆಯ ಕಡೆಗೆ ಜನ ಆಕರ್ಷಿತರಾಗುತ್ತಲೇ ಇದ್ದಾರೆ ಎಂದು ಗಾಂಧಿ ಕೃತಿಗಳ ಹಕ್ಕುಸ್ವಾಮ್ಯವನ್ನು ಪಡೆದಿರುವ ನವಜೀವನ ಟ್ರಸ್ಟ್ನ ನಿರ್ವಾಹಕರಾದ ಜಿತೇಂದ್ರ ದೇಸಾಯಿ ಹೇಳುತ್ತಾರೆ.
ಕೇರಳ ರಾಜ್ಯದಲ್ಲೇ ಒಂದು ಲಕ್ಷ ಪ್ರತಿಗಳು ಪ್ರತಿವರ್ಷ ಮಾರಾಟವಾಗುತ್ತವೆಯಂತೆ. ನಂತರದ ಸ್ಥಾನದಲ್ಲಿ ತಮಿಳುನಾಡು, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ರಾಜ್ಯಗಳ ಜನ ಗಾಂಧಿ ಆತ್ಮಕತೆಯನ್ನು ಬಹಳಷ್ಟು ನೆಚ್ಚಿಕೊಂಡಿದ್ದಾರೆ. ಗಾಂಧಿ ಆತ್ಮಕತೆಯ ಮೊದಲ ಆವೃತ್ತಿಯನ್ನು ಟ್ರಸ್ಟ್ 1927ರಲ್ಲಿ ಗುಜರಾತಿ ಭಾಷೆಯಲ್ಲಿ ಹೊರತಂದಿತ್ತು. ಇಂದು ಕನ್ನಡ ಸೇರಿದಂತೆ ಬಹುತೇಕ ಎಲ್ಲಾ ಭಾರತೀಯ ಭಾಷೆಗಳಲ್ಲೂ ಆ ಕೃತಿ ದೊರೆಯುತ್ತದೆ.
ಇಷ್ಟಕ್ಕೂ ಗಾಂಧಿ ವಿಚಾರಧಾರೆಗಳನ್ನು ತಿಳಿಯಲು ಅವರ ಆತ್ಮಕತೆಗೆ ಮೊರೆಹೋಗುತ್ತಿರುವ ಓದುಗ ವಲಯವಾದರೂ ಯಾವುದು ಎಂದು ಕೇಳಿದರೆ ಆಶ್ಚರ್ಯಕರವಾದ ಉತ್ತರ ಸಿಗುತ್ತದೆ. ಹಿರಿಯರಿಗಿಂತಲೂ ಹೊಸ ತಲೆಮಾರಿನ ಯುವಕರೇ ಹೆಚ್ಚು ಹೆಚ್ಚು ಗಾಂಧಿ ಆತ್ಮಕತೆಯನ್ನು ಓದುತ್ತಿದ್ದಾರೆ. ಹಿಂಸಾಚಾರದಂಥ ಆಧುನಿಕ ಸಮಸ್ಯೆಗಳನ್ನು ಹತ್ತಿಕ್ಕಲು ಗಾಂಧಿ ವಿಚಾರಧಾರೆಯೇ ಸೂಕ್ತ ಮಾರ್ಗ ಎಂದು ಯುವಜನತೆ ಕಂಡುಕೊಳ್ಳುತ್ತಿದ್ದಾರೆ ಎಂದು ಗಾಂಧಿವಾದಿ, ಸಾಮಾಜಿಕ ಕಾರ್ಯಕರ್ತೆ ನಿರ್ಮಲಾ ದೇಶಪಾಂಡೆ ಹೇಳುತ್ತಾರೆ.
(ಏಜನ್ಸೀಸ್)