ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೇಂದ್ರದ ಧೋರಣೆ ಖಂಡಿಸಿ ನಡೆಸಿದ ರೈಲು ತಡೆ ಯಶಸ್ವಿ
ಬೆಂಗಳೂರು, ಜ.27: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡದೆ ಸತಾಯಿಸುತ್ತಿರುವ ಕೇಂದ್ರ ಸರ್ಕಾರ ಹಾಗೂ ರೈಲ್ವೇ ನೇಮಕಾತಿಯಲ್ಲಿ ನಡೆಯುತ್ತಿರುವ ಕನ್ನಡ ವಿರೋಧಿ ಪ್ರಕ್ರಿಯೆಯನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಭಾನುವಾರ ನಡೆಸಿದ ರೈಲ್ವೇ ಬಂದ್ ಯಶಸ್ವಿಯಾಗಿದೆ.
ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕೊಪ್ಪಳ, ಗದಗ, ಚಾಮರಾಜನಗರ, ಮಂಡ್ಯ,ಶಿವಮೊಗ್ಗ, ಮೈಸೂರು, ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಮಂಗಳೂರು, ದಕ್ಷಿಣಕನ್ನಡಜಿಲ್ಲೆಗಳಲ್ಲಿ ಮಾತ್ರ ರೈಲು ಸಂಚಾರ ಎಂದಿನಂತ್ತಿತ್ತು. ತುಮಕೂರಿನಲ್ಲಿ ನೀರಸ ಪ್ರತಿಕ್ರಿಯೆ ಕಂಡುಬಂದಿತು.
ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ , ವಾಟಾಳ್ ನಾಗರಾಜ್ ಬಣ, ಅಖಿಲ ಕರ್ನಾಟಕ ಗಡಿನಾಡು ಹೋರಾಟ ಸಮಿತಿ, ಕನ್ನಡ ಸೇನೆ, ಕರ್ನಾಟಕ ಸಿಂಹ ಸೇನೆ, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ವಿವಿಧೆಡೆಗಳಲ್ಲಿ ರೈಲು ತಡೆ ನಡೆಸಿ, ಪ್ರತಿಭಟನೆ ನಡೆಸಿದವು.
ಹೋರಾಟದ
ಮುಖ್ಯಾಂಶಗಳು:
- ಮುಂಜಾನೆ ಆರಂಭವಾದ ಪ್ರತಿಭಟನೆಯಿಂದ ಬೃಂದಾವನ ಎಕ್ಸ್ ಪ್ರೆಸ್,ಕುರ್ಲಾ ಎಕ್ಸ್ ಪ್ರೆಸ್, ಕಾಚಿಗುಡ ಎಕ್ಸ್ ಪ್ರೆಸ್, ಪ್ರಶಾಂತಿ ಎಕ್ಸ್ ಪ್ರೆಸ್ ಸೇರಿದಂತೆ ಹಲವು ರೈಲುಗಳ ಅಗಮನ ನಿರ್ಗಮನ ವಿಳಂಬವಾಯಿತು
- ಮನ್ನೆಚ್ಚರಿಕೆಯ ಕ್ರಮವಾಗಿ ರೈಲು ನಿಲ್ದಾಣಗಳಲ್ಲಿ ಟಿಕೇಟ್ ಕೌಂಟರ್ ಗಳನ್ನು ಬಂದ್ ಮಾಡಲಾಗಿತ್ತು.
- ನಗರದ ಮೈಸೂರು ಬ್ಯಾಂಕ್ ವೃತ್ತದಿಂದು ಶುರುವಾದ ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಕೆ.ಆರ್.ಕುಮಾರ್, ಪ್ರವೀಣ್ ಶೆಟ್ಟಿ, ಶಿವರಾಮೇಗೌಡ, ಎನ್.ಮೂರ್ತಿ, ಚಿ.ನಾ.ರಾಮು ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
- ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ರೈಲ್ವೇ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ, ನಂಜುಡಪ್ಪ ವರದಿ, ಸರೋಜಿನಿ ಮಹಿಷಿ ವರದಿ, ಬರಗೂರು ರಾಮಚಂದ್ರಪ್ಪ ವರದಿಗಳನ್ನು ಅನುಷ್ಠಾನಗೊಳಿಸಬೇಕು ಎಂಬುದು ಹೋರಾಟಗಾರರ ಪ್ರಮುಖ ಬೇಡಿಕೆಗಳು.
- ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ ನಿರತ ಕನ್ನಡಪರ ಕಾರ್ಯಕರ್ತರನ್ನು ಬಂದೀಖಾನೆ ಬದಲಿಗೆ ದನದ ಕೊಟ್ಟಿಗೆಯಲ್ಲಿ ಕೂರಿಸಲಾಯಿತು.ದೊಡ್ಡದಾದ ಬಂದೀಖಾನೆ ಇಲ್ಲದ ಕಾರಣ ಈ ಕ್ರಮ ಕೈಗೊಳ್ಳ ಬೇಕಾಯಿತು ಎಂದು ಪೊಲೀಸರು ನಂತರ ಹೇಳಿಕೆ ನೀಡಿದರು.
- ಕೇಂದ್ರ ಸರ್ಕಾರ ಕನ್ನಡಿಗರ ಬೇಡಿಕೆ ಈಡೇರಿಸದಿದ್ದರೆ, ಫೆ.16 ರಂದುನವದೆಹಲಿಗೆ ತೆರಳಿ ಪ್ರಧಾನಿಮಂತ್ರಿಗಳ ನಿವಾಸದ ಎದುರು ಪ್ರತಿಭಟನೆ ನಡೆಸುವುದಾಗಿ ವಾಟಾಳ್ ನಾಗರಾಜ್ ಸುದ್ದಿಗಾರರಿಗೆ ತಿಳಿಸಿದರು.
(ದಟ್ಸ್ ಕನ್ನಡವಾರ್ತೆ )
Comments
Story first published: Monday, January 28, 2008, 11:15 [IST]