ಹಕ್ಕಿ ಜ್ವರ : ಸಂಕಷ್ಟದಲ್ಲಿ ರಾಜ್ಯದ ಕೋಳಿ ಉದ್ಯಮ
ಮೈಸೂರು, ಜ.22 : ಪಶ್ಚಿಮ ಬಂಗಾಳದಲ್ಲಿ ಉಲ್ಬಣಿಸುತ್ತಿರುವ ಹಕ್ಕಿ ಜ್ವರದ ಕಾವು ಕರ್ನಾಟಕಕ್ಕೂ ತಟ್ಟಲು ಪ್ರಾರಂಭಿಸಿದೆ. ಹಕ್ಕಿ ಜ್ವರ ಇಲ್ಲಿ ಕಾಣಿಸಿಕೊಳ್ಳದಿದ್ದರೂ ಕೋಳಿ ಮತ್ತು ಮೊಟ್ಟೆ ಮಾರುಕಟ್ಟೆಯ ಮೇಲೆ ಭಾರೀ ಹೊಡೆತ ಬೀಳುತ್ತಿದೆ.
ಸಗಟು ವ್ಯಾಪಾರಿಗಳು ಮತ್ತು ಜನಸಾಮಾನ್ಯರು ಕೋಳಿ ಅಥವ ಮೊಟ್ಟೆ ಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಚಿಕನ್ ಬೆಲೆ ಕೆ.ಜಿ.ಗೆ 20 ರು.ಯಷ್ಟು ಮತ್ತು ಪ್ರತಿ ಮೊಟ್ಟೆ ಬೆಲೆ 40 ಪೈಸೆ ಕಡಿಮೆಯಾಗಿದೆ. ಪೌಲ್ಟ್ರಿ ಉದ್ಯಮಿಗಳು ನಷ್ಟ ಅನುಭವಿಸುತ್ತಿದ್ದಾರೆ.
ಮೈಸೂರೊಂದರಲ್ಲೇ 81 ಪೌಲ್ಟ್ರಿ ಫಾರ್ಮ್ಗಳಿವೆ. ಪ್ರತಿದಿನ ಹನ್ನೆರಡು ಲಕ್ಷ ಮೊಟ್ಟೆಗಳು ನೆರೆರಾಜ್ಯ ಕೇರಳಕ್ಕೆ ರವಾನೆಯಾಗುತ್ತವೆ. ಆದರೆ, ಗಡಿಯಲ್ಲಿನ ಕೇರಳ ಅಧಿಕಾರಿಗಳು ಮೊಟ್ಟೆಗಳು ಕೇರಳದೊಳಗೆ ಹೋಗದಂತೆ ತಡೆಯುತ್ತಿದ್ದಾರೆ ಎಂದು ಪಶು ಸಂಗೋಪನ ಇಲಾಖೆ ಮೂಲಗಳು ತಿಳಿಸಿವೆ.
ಇಲಾಖೆಯ ಅಧಿಕಾರಿಗಳು, ರಾಜ್ಯದ ಕೋಳಿಗಳಿಗೆ ಹಕ್ಕಿ ಜ್ವರ ಬಂದಿಲ್ಲ ಮತ್ತು ಪೌಲ್ಟ್ರಿ ಉತ್ಪನ್ನಗಳು ಸೇವನೆಗೆ ಯೋಗ್ಯವಾಗಿವೆಯೆಂದು ಹೇಳಿಕೆ ನೀಡಿದ್ದರೂ ಕೇರಳ ಮಾನ್ಯತೆ ನೀಡುತ್ತಿಲ್ಲ ಎಂದು ತಿಳಿದುಬಂದಿದೆ.
(ಯುಎನ್ಐ)