ಕರ್ನಾಟಕದಲ್ಲಿ ನಾನು ಹುಟ್ಟಬಾರದಿತ್ತು :ದೇವೇಗೌಡ
ಬೆಂಗಳೂರು, ಜ. 22 : ಕರ್ನಾಟಕದ ಮಾಜಿ ಮುಖ್ಯಮಂತ್ರಿ, ರಾಷ್ಟ್ರದ ಮಾಜಿ ಪ್ರಧಾನ ಮಂತ್ರಿ, ಥರಾವರಿ ತಂತ್ರಗಳನ್ನು ಹೂಡಿ ಮಗನನ್ನೇ ರಾಜ್ಯ ಗದ್ದುಗೆಯ ಮೇಲೆ ಕೂಡಿಸಿದ ಚತುರ, ಇನ್ನೊಬ್ಬ ಮಗನನ್ನೂ ಮುಖ್ಯಮಂತ್ರಿ ಮಾಡಲು ಹೋಗಿ ಮುಗ್ಗರಿಸಿ ಬಿದ್ದ ರಾಜಕೀಯ ನಿಪುಣ ಎಚ್.ಡಿ.ದೇವೇಗೌಡರ ಪಾಪದ ಕೊಡ ತುಂಬುತ್ತಿದೆಯೇ?
ಪ್ರಸ್ತುತ ರಾಜಕೀಯ ಬೆಳವಣಿಗೆಗಳು, ಪಕ್ಷದಲ್ಲೇ ಅವರನ್ನು 'ಗೌರವಿಸುತ್ತಿರುವ' ಬಗೆ, ಪಕ್ಷದ ಕಾರ್ಯಕರ್ತರ ಮೇಲೆ ಹರಿಹಾಯುತ್ತಿರುವ ರೀತಿ, ಚುನಾವಣಾ ಪ್ರಸಾರ ಸಭೆಗಳಲ್ಲಿ ಅವರಾಡುತ್ತಿರುವ ಮಾತುಗಳು ಮುಖಕ್ಕೆ ಕನ್ನಡಿ ಹಿಡಿದಂತೆ ಹೇಳುತ್ತಿವೆ ;'ದೇವೇಗೌಡರ ಪಾಪದ ಕೊಡ ತುಂಬಿ ತುಳುಕುತ್ತಿದೆ'.
"ನಾನು ಪ್ರಧಾನಿಯಾಗಿ ರಾಜೀನಾಮೆ ನೀಡಿದಾಗ ಕೆಲವರು ಪಟಾಕಿ ಹಾರಿಸಿ ಹರ್ಷಿಸಿದರು. ನಾನು ಕರ್ನಾಟಕದಲ್ಲಿ ಹುಟ್ಟಬಾರದಿತ್ತು" ಎಂದು ಗೌಡರು ಹೇಳಿಕೊಂಡಿದ್ದಾರೆ. ಈ ಮಾತನ್ನು ಹೇಳಿ ತಮ್ಮ ರಾಜಕೀಯ ವಿರೋಧಿಗಳನ್ನು ಮಾತ್ರವಲ್ಲ, ಆತ್ಮಗೌರವವಿರುವ ಇಡೀ ರಾಜ್ಯದ ಪ್ರತಿಯೊಬ್ಬ ಕನ್ನಡಿಗನನ್ನು ದೇವೇಗೌಡರು ಅವಮಾನಿಸಿದ್ದಾರೆ. "ಹುಟ್ಟಿದರೆ ಕನ್ನಡನಾಡಿನಲ್ಲಿ ಹುಟ್ಟಬೇಕು" ಎಂಬ ರಾಜ್ ಹಾಡಿಗೆ ಎದ್ದು ಕುಣಿಯುವ ಕನ್ನಡಿಗರು, ದೇವೇಗೌಡರ "ನಾನು ಕರ್ನಾಟಕದಲ್ಲಿ ಹುಟ್ಟಬಾರದಿತ್ತು" ಎಂಬ ವರಾತ ಕೇಳಿ ಕನ್ನಡ ಮಣ್ಣಿನ ಮಕ್ಕಳು ದುಃಖಿತರಾಗಿದ್ದಾರೆ.
ಈ ಮಾತನ್ನು ನಾನು ಹೇಳಿಯೇ ಇಲ್ಲ, ಮಾಧ್ಯಮದವರು ಇದನ್ನು ತಿರುಚಿ ಬರೆದಿದ್ದಾರೆ ಎಂದು ದೇವೇಗೌಡರು ಮತ್ತೊಂದು ಹೇಳಿಕೆ ನೀಡಿದರೆ ಏನೇನೂ ಆಶ್ಚರ್ಯವಿಲ್ಲ. ಹೇಳಿದಂತೆ ನಡೆದುಕೊಳ್ಳದಿರುವುದು, ಹೇಳಿದ್ದನ್ನು ಹೇಳಿಲ್ಲ ಎಂದು ವಾದಿಸುವುದು, ಕೊಟ್ಟ ಮಾತು ತಪ್ಪುವುದಕ್ಕೆ ಇನ್ನೊಂದು ಹೆಸರೇ ದೇವೇಗೌಡ ಎನ್ನುವಂತಾಗಿರುವಾಗ ಈ ಮಾತನ್ನೂ ಅವರು ಅಲ್ಲಗಳೆದೇ ಅಲ್ಲಗಳೆಯುತ್ತಾರೆ.
ಮೈಸೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕೂಡ 'ರಾಜಕೀಯದಲ್ಲಿ ಇದು ನನ್ನ ಕೊನೆಯ ಹೋರಾಟ' ಎಂಬ ಮಾತನ್ನು ಹೇಳಿದ್ದಾರೆ. ಅವರ ಹೋರಾಟವನ್ನು ಅವರೇ ಕೊನೆಗೊಳಿಸುತ್ತಾರೋ, ಜನತೆಯೇ ಸಮಾಪ್ತಿ ಮಾಡುತ್ತದೋ ಮುಂದಿನ ವಿಧಾನಸಭೆಯ ಚುನಾವಣೆಯೇ ನಿರ್ಧರಿಸಲಿದೆ. ಇಷ್ಟಕ್ಕೂ ರಾಜಕೀಯದಲ್ಲಿ ನಿವೃತ್ತಿ ಅಂಬೋದೇ ಇಲ್ಲವಲ್ಲ! ಅವರು ಈ ಮತನ್ನೂ ಮೀರಿ ಚುನಾವಣೆಯಲ್ಲಿ ಮಣ್ಣುಮುಕ್ಕಿದ ನಂತರವೂ ಮತ್ತೆ ತಮ್ಮ ಮಕ್ಕಳ ಸಲುವಾಗಿ, ಮೊಮ್ಮಕ್ಕಳ ಸಲುವಾಗಿ 'ರಾಜಕೀಯ' ಪ್ರಾರಂಭಿಸಿದರೂ ಆಶ್ಚರ್ಯವಿಲ್ಲ.
(ದಟ್ಸ್ ಕನ್ನಡವಾರ್ತೆ )