ಪುತ್ತಿಗೆಶ್ರೀಗಳಿಗೆ ಜಯ,ಪೇಜಾವರ ಶಿಬಿರಕ್ಕೆ ಹಿನ್ನಡೆ
ಉಡುಪಿ , ಜ.14: ಪುತ್ತಿಗೆ ಶ್ರೀ ಸುಗಣೇಂದ್ರ ತೀರ್ಥ ಸ್ವಾಮೀಜಿಯವರಿಗೆ ಪರ್ಯಾಯ ಪೂಜೆಗೆ ಅವಕಾಶ ನೀಡದಿರುವಂತೆ ಕೋರಿ ಭಕ್ತರು ಕೋರಿದ್ದ ಅರ್ಜಿಯನ್ನು ಸ್ಥಳೀಯ ಸೆಷನ್ಸ್ ನ್ಯಾಯಾಲಯ ಸಾರಾಸಗಟಾಗಿ ತಳ್ಳಿ ಹಾಕಿದೆ.
ಈ ಮಧ್ಯಂತರ ತೀರ್ಪಿನಿಂದ ಪರ್ಯಾಯ ವಿವಾದ ಮತ್ತೆ ಕುತೂಹಲ ಘಟ್ಟ ತಲುಪಿದೆ.ನ್ಯಾಯಾಲಯ ತೀರ್ಪು ಸಾಧುವಲ್ಲ. ವಿದ್ವಾಂಸರ ಹಾಗೂ ಮಠಾಧೀಶರ ತೀರ್ಮಾನವೇ ಅಂತಿಮ ಎಂದು ಪೇಜಾವರ ಶ್ರೀಗಳ ಬೆಂಬಲಿಗರು ಪ್ರತಿಕ್ರಿಯಿಸುತ್ತಿದ್ದಾರೆ.
ಪರ್ಯಾಯ ಪೀಠ ವಿವಾದದಿಂದಾಗಿ ಅಷ್ಟಮಠಗಳು ಇಬ್ಭಾಗವಾಗಿ, ಕೊನೆಗೆ ಪೇಜಾವರ ಶ್ರೀಗಳು ಹಾಗೂ ಪುತ್ತಿಗೆ ಶ್ರೀಗಳ ನಡುವೆ ನೇರ ಹೋರಾಟ ಎಂಬಂತೆ ಎಲ್ಲೆಡೆ ಬಿಂಬಿತವಾಗಿದೆ. ಪೇಜಾವರಶ್ರೀಗಳಿಗೂ ಮೊದಲು ಉಪವಾಸ ಆರಂಭಿಸಿದ್ದ ಅವರ ಶಿಷ್ಯ ಶ್ರೀ ವಿಶ್ವ ಪ್ರಸನ್ನ ತೀರ್ಥರು ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳ ಕೋರಿಕೆ ಮೇರೆಗೆ ಹಿಂತೆಗೆದುಕೊಂಡಿದ್ದರು.
ಈ ಹಾದಿಯಲ್ಲೆ ನಡೆದ ಫಲಿಮಾರು ಮಠದಶ್ರೀ ವಿದ್ಯಾಧೀಶ ತೀರ್ಥರೂ ನಿರಾಹಾರ ಉಪವಾಸ ಆರಂಭಿಸಿದ್ದರು. ಇದೀಗ ಹೊರ ಬಿದ್ದಿರುವ ನ್ಯಾಯಾಲಯದ ಅದೇಶ ಪುತ್ತಿಗೆ ಶ್ರೀಗಳ ಪರವಾಗಿ ಇರುವ ಕಾರಣ, ಪೇಜಾವರ ಶ್ರೀಗಳ ಮತ್ತು ಅವರ ಹಿಂಬಾಲಕರ ಮುಂದಿನ ನಡೆ ಏನು ಎಂಬುದನ್ನು ಕಾದುನೋಡಬೇಕಾಗಿದೆ.
(ದಟ್ಸ್ ಕನ್ನಡವಾರ್ತೆ)