ಸಂಕ್ರಾತಿ ಬೆಲ್ಲದೊಂದಿಗೆ ಶಾಕ್ ಕೊಟ್ಟ ಬೆಸ್ಕಾಂ!
ಬೆಂಗಳೂರು, ಜ.13: ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಲಿ (ಕೆಇಆರ್ಸಿ) ಆದೇಶದಂತೆ ಮುಂದಿನ ಎರಡು ತಿಂಗಳು ಪ್ರತಿ ಯುನಿಟ್ಗೆ 27 ಪೈಸೆ ರಿಯಾಯತಿ ಪ್ರಕಟಿಸಿದ ಬೆಸ್ಕಾಂ ನಂತರದ ಎರಡು ವರ್ಷ ಕ್ರಮವಾಗಿ 34 ಪೈಸೆ ಹಾಗೂ 57 ಪೈಸೆ ಹೆಚ್ಚಿಗೆ ಪಾವತಿಸಿ ಎಂದು ಹೇಳುತ್ತಿದೆ. ದರ ಇಳಿಸಿದಂತೆ ಮಾಡಿ ನಂತರ ಏರಿಸುವ ಜಾಣತನ ಪ್ರದರ್ಶಿಸಿದೆ.
ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ವಿದ್ಯುತ್ ಗ್ರಾಹಕರಿಗೆ ಫೆ.1ರಿಂದ ಪರಿಷ್ಕೃತ ದರಗಳು ಜಾರಿಯಾಗಲಿವೆ. ಮೇಲ್ನೋಟಕ್ಕೆ ಬೆಸ್ಕಾಂ ತನ್ನ ಗ್ರಾಹಕರಿಗೆ ನೀಡಿರುವ ಸಂಕ್ರಾಂತಿ ಕೊಡುಗೆ ಇದು. ಆದರೆ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೆಸ್ಕಾಂನ ಜಾಣತನ ಅರಿವಾಗುತ್ತದೆ.
ಪ್ರಸ್ತುತ ವಿದ್ಯುತ್ ದರ ಯುನಿಟ್ಗೆ 3.56 ಪೈಸೆ. ಇದನ್ನು ಪ್ರಸಕ್ತ ಆರ್ಥಿಕ ವರ್ಷದ ಕಡೆಯ ಎರಡು ತಿಂಗಳಿಗೆ 3.29 ಪೈಸೆ ಎಂದು ನಿಗದಿ ಮಾಡಲಾಗಿದೆ. ಅಂದರೆ 27 ಪೈಸೆ ಕಡಿತಗೊಳಿಸಿದೆ. ಆದರೆ 2008-09ರ ಆರ್ಥಿಕ ವರ್ಷದಿಂದ ಪ್ರತಿ ಯುನಿಟ್ಗೆ 3.63 ಪೈಸೆ ಹಾಗೂ 2009-10ನೇ ಹಣಕಾಸು ವರ್ಷದಿಂದ 3.76 ಪೈಸೆ ದರ ನಿಗದಿಪಡಿಸಿದೆ.
ಮೇಲ್ನೊಟಕ್ಕೆ ದರ ಇಳಿಕೆಯಾದಂತೆ ಕಂಡರೂ ಎರಡು ತಿಂಗಳ ನಂತರ ವಿದ್ಯುತ್ ದರದಲ್ಲಿ 34 ಪೈಸೆ ಹೆಚ್ಚಳವಾಗಲಿದೆ. ಆದರೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ವಿದ್ಯುತ್ ದರವನ್ನು 35 ಪೈಸೆ, ಗ್ರಾಮಪಂಚಾಯತಿ ವ್ಯಾಪ್ತಿಯ ಗೃಹ ಬಳಕೆದಾರರ ವಿದ್ಯುತ್ ದರ 20 ಪೈಸೆ ಇಳಿಸಲಾಗಿದೆ.
(ದಟ್ಸ್ಕನ್ನಡ ವಾರ್ತೆ)