ನಗರದ ಜಯದೇವ ಆಸ್ಪತ್ರೆ ವೈದ್ಯರುಗಳಿಂದ ಸಾಧನೆ
ಬೆಂಗಳೂರು , ಜ.12: ದಕ್ಷಿಣ ಏಷ್ಯಾದಲ್ಲಿಯೇ ಪ್ರಥಮ ಎನ್ನಬಹುದಾದ ಕಠಿಣವಾದ ಶಸ್ತ್ರಚಿಕಿತ್ಸೆಯನ್ನು ನಗರದ ಜಯದೇವ ಹೃದೋಗ ಸಂಸ್ಥೆ ಸಾಧಿಸಿದೆ. ಕೇವಲ 15 ದಿನಗಳ ಮಗುವಿಗೆ ಪೇಸ್ ಮೇಕರ್ ಅಳವಡಿಕೆ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಹೃದಯ ಬಡಿತದ ಏರುಪೇರುಗಳನ್ನು ಸರಿಹೊಂದಿಸಲು ಪೇಸ್ ಮೇಕರ್ ಸಹಾಯಕವಾಗಲಿದೆ. ಸಾಮಾನ್ಯವಾಗಿ ವಯಸ್ಕರಲ್ಲಿ ಹೃದಯ ಬಡಿತ ನಿಮಿಷಕ್ಕೆ 60ರಿಂದ 80 ಇರುತ್ತದೆ. ನವಜಾತ ಶಿಶುಗಳಲ್ಲಿ ಸುಮಾರು110 ರಿಂದ 140 ಇರಬೇಕಾಗುತ್ತದೆ.ಆದರೆ, ಚಿಕಿತ್ಸೆಗೊಳಗಾದ 15 ದಿನಗಳ ಮಗುವಿನ ಹೃದಯ ಬಡಿತ 40ಮಾತ್ರ ಇತ್ತು ಎಂದು ಸಂಸ್ಥೆಯ ನಿರ್ದೇಶಕ ಡಾ. ಸಿ .ಎನ್ . ಮಂಜುನಾಥ್ ತಿಳಿಸಿದರು.
ಪೇಸ್ ಮೇಕರ್ ಉಪಕರಣಕ್ಕೆ 1ಲಕ್ಷ ಮತ್ತು ಚಿಕಿತ್ಸಾ ವೆಚ್ಚ 30,000ರು ತಗುಲುತ್ತದೆ. ಚಿಕಿತ್ಸೆಗೊಳಗಾದ ಮಗುವಿನ ತಂದೆ ದಿನಗೂಲಿ ನೌಕರನಾದ ಕಾರಣ, ಚಿಕಿತ್ಸಾ ವೆಚ್ಚವನ್ನು ಭರಿಸಲು ಅಶಕ್ತನಾಗಿದ್ದ. ನಗರದ ಪೂರ್ವರೋಟರಿ ಕ್ಲಬ್ ಸಹಾಯದಿಂದ ಪೇಸ್ ಮೇಕರ್ ಪಡೆದು, ಜಯದೇವ ಸಂಸ್ಥೆ ಉಚಿತವಾಗಿ ಶಸ್ತ್ರ ಚಿಕಿತ್ಸೆಯನ್ನು ಮಾಡಿದೆ ಎಂದು ಸಿ.ಎನ್.ಮಂಜುನಾಥ್ ಹೇಳಿದರು.
ಡಾ.ದೇವಾನಂದ್ ಹಾಗೂ ಡಾ.ಜಯಪ್ರಕಾಶ್ ಈ ಶಸ್ತ್ರಚಿಕಿತ್ಸೆ ಯನ್ನು ಯಶಸ್ವಿಯಾಗಿ ಪೂರೈಸಿದ ವೈದರುಗಳಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)