ಸಿಇಟಿ ಅಭ್ಯರ್ಥಿಗಳ ನೆರವಿಗೆ 'ದೀವಿಗೆ'
ಬೆಂಗಳೂರು, ಡಿ.31: ದೂರದರ್ಶನ ಕೇಂದ್ರವು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ತೆಗೆದುಕೊಳ್ಳಲಿರುವ ಪಿಯುಸಿ ಹಾಗೂ ತತ್ಸಮಾನ ವಿದ್ಯಾರ್ಥಿಗಳಿಗಾಗಿ 'ದೀವಿಗೆ' ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ ಎಂದು ದೂರದರ್ಶನ ಕೇಂದ್ರದ ನಿರ್ದೇಶಕರಾದ ಮಹೇಶ್ ಜೋಶಿ ಸೋಮವಾರ(ಡಿ.31) ತಿಳಿಸಿದರು.
ಕಳೆದ ವರ್ಷ ಪಿಯುಸಿ ವಿದ್ಯಾರ್ಥಿಗಳಿಗಾಗಿ ದೂರದರ್ಶನ ಕೇಂದ್ರವು 'ಸಿಇಟಿ ಚಾಣಕ್ಯ' ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು. ಆ ಕಾರ್ಯಕ್ರಮ ಯಶಸ್ವಿಯೂ ಆಯಿತು ಎಂದು ಜೋಷಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 'ದೀವಿಗೆ" ಕಾರ್ಯಕ್ರಮವು 36 ಕಂತುಗಳಲ್ಲಿ ಪ್ರಸಾರವಾಗಲಿದೆ. ಇದು ಸಿಇಟಿ, ಎಐಇಇಇ(All India Engineering Entrance Examination) ನಂತಹ ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಗ್ರಾಮೀಣ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಕಳೆದ ಬಾರಿಯ 'ಸಿಇಟಿ ಚಾಣಕ್ಯ' ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು ಎಂದು ಅವರು ಹೇಳಿದರು.'ದೀವಿಗೆ' ಕಾರ್ಯಕ್ರಮವು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಕಾರ್ಯಕ್ರಮದ ಎಲ್ಲಾ ಕಂತುಗಳನ್ನೂ ಸಿಡಿ ರೂಪದಲ್ಲಿ ಹೊರತರಲಾಗುವುದೆಂದು ಕಾರ್ಯಕ್ರಮದ ನಿರ್ಮಾಪಕರಾದ ಶೋಭಾ ವಿ ರಾಮಯ್ಯ ಈ ಸಂದರ್ಭದಲ್ಲಿ ತಿಳಿಸಿದರು.
(ದಟ್ಸ್ಕನ್ನಡ ವಾರ್ತೆ)