2007 ಲೋಕಾಯುಕ್ತರಿಗೆ ಹಬ್ಬ, ಭ್ರಷ್ಟರಿಗೆ ಹುಟ್ಟಿದಹಬ್ಬ!
ಬೆಂಗಳೂರು, ಡಿ.31 : 2007 ಕರ್ನಾಟಕದಲ್ಲಿ ಭ್ರಷ್ಟಾಚಾರಿಗಳಿಗೆ ಭಾರೀ ಕರಾಳ ವರ್ಷವಾದರೆ ಲೋಕಾಯುಕ್ತಕ್ಕೆ ಭರ್ಜರಿ ಫಸಲು.
ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ನೇತೃತ್ವದ ತಂಡ ಈ ವರ್ಷದಲ್ಲಿ ಒಟ್ಟು 36 ಲಂಚಕೋರರ ಮೇಲೆ ದಾಳಿ ನಡೆಸಿದ್ದು 70 ಕೋಟಿ ಆಸ್ತಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ವರ್ಷಪೂರ್ತಿ ನಡೆಸಿದ ದಾಳಿ, ವರಮಾನ ಮೀರಿದ ಆಸ್ತಿಪಾಸ್ತಿಗಳ ಪತ್ತೆ, ಸಿಕ್ಕಿದ ತಿಮಿಂಗಲಗಳ ಬಗ್ಗೆ ಉಪಲೋಕಾಯುಕ್ತ ನ್ಯಾ.ಪತ್ರಿಬಸವನ ಗೌಡ ಅವರು ಸೋಮವಾರ ವಿವರ ನೀಡಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಪ್ರದವಾಗಿದೆ. 2006ರಲ್ಲಿ 27 ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದರೆ ಈ ವರ್ಷ 36 ಅಧಿಕಾರಿಗಳು ಬಲೆಗೆ ಬಿದ್ದಿದ್ದಾರೆ ಎಂದು ಅವರು ತಿಳಿಸಿದರು.
ಒಟ್ಟು 225 ಸರ್ಕಾರಿ ನೌಕರರು ಲಂಚ ತಿನ್ನುವಾಗ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಕಳೆದ ವರ್ಷ 215 ನೌಕರರು ಸಿಕ್ಕಿಬಿದ್ದಿದ್ದರು ಎಂದು ಪತ್ರಿಬಸವನ ಗೌಡ ತಿಳಿಸಿದರು.
ಪ್ರಸಕ್ತ ವರ್ಷದಲ್ಲಿ 159 ಪ್ರಕರಣಗಳನ್ನು ವಿಚಾರಣೆಯ ನಂತರ ವಿಲೇವಾರಿ ಮಾಡಲಾಗಿದೆ. 130 ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಹಾಕಲಾಗಿದೆ. 21 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ ಎಂದು ವಿವರಿಸಿದರು.
(ಯುಎನ್ಐ)