ಗಣಿ ಧಣಿಗಳ ವಿರೋಧದ ನಡುವೆ ಬಿಜೆಪಿಗೆ ಪ್ರಕಾಶ್?
ಬೆಂಗಳೂರು, ಡಿ.25 : ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ, ಬಳ್ಳಾರಿ ಬಿಜೆಪಿ ನಾಯಕರ ವಿರೋಧದ ನಡುವೆಯೂ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಬಿಜೆಪಿ ಸೇರಲಿದ್ದಾರೆಂದು ತಿಳಿದುಬಂದಿದೆ. ಬಿಜೆಪಿ ಸೇರುವ ತಮ್ಮ ನಿರ್ಧಾರವನ್ನು ಡಿ.27ರ ಅಂತಿಮ ಹಂತದ ಮಾತುಕತೆಯ ನಂತರ ಪ್ರಕಟಿಸುವುದಾಗಿ ಪ್ರಕಾಶ್ ತಿಳಿಸಿದ್ದಾರೆ.
ಪ್ರಕಾಶ್ ಅವರನ್ನು ಬಿಜೆಪಿಗೆ ಕರೆತರಬೇಕೆಂಬ ಅಭಿಪ್ರಾಯ ಬಿಜೆಪಿ ಪಕ್ಷದಲ್ಲೂ ಇದೆ. ಈಗಾಗಲೇ ಪ್ರಕಾಶ್ ಅವರೊಂದಿಗೆ ಜಿ.ಟಿ. ದೇವೇಗೌಡ ಅವರ ನೇತೃತ್ವದಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿದೆ. ಆದರೆ ಪ್ರಕಾಶ್ರ ಆಗಮನವನ್ನು ಬಳ್ಳಾರಿ ಬಿಜೆಪಿ ನಾಯಕರಾದ ಕರುಣಾಕರ ರೆಡ್ಡಿ, ಜನಾರ್ಧನ ರೆಡ್ಡಿ ಹಾಗೂ ಬಿ.ಶ್ರೀರಾಮುಲು ವಿರೋಧಿಸುತ್ತಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗಿದೆ.
ಪ್ರಕಾಶ್ ಹಿರಿಯ ನಾಯಕರು. ಪಕ್ಷದ ವಿಚಾರಗಳಲ್ಲಿ ಮೂಗು ತೂರಿಸಬಹುದು. ಸಾಲದಕ್ಕೆ ಬಳ್ಳಾರಿ ಬಿಜೆಪಿ ನಾಯಕರು ಪ್ರಕಾಶ್ರೊಂದಿಗೆ ಬಹಳಷ್ಟು ಹೆಣಗಿದ್ದಾರೆ. ಈಗ ಅವರನ್ನು ಬಿಜೆಪಿಗೆ ಆಹ್ವಾನಿಸುವುದು ಅಷ್ಟು ಸರಿಯಲ್ಲ ಎಂಬ ಇಂಗಿತ ಬಳ್ಳಾರಿ ಬಿಜೆಪಿ ನಾಯಕರಲ್ಲಿ ವ್ಯಕ್ತವಾಗಿದೆ.
ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿದ ಬಳಿಕ ಪ್ರಕಾಶ್ ಅವರನ್ನು ಬಿಜೆಪಿಗೆ ಆಹ್ವಾನಿಸುವ ನಿರ್ಧಾರವನ್ನು ಪ್ರಕಟಿಸುವುದಾಗಿ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.
(ದಟ್ಸ್ಕನ್ನಡ ವಾರ್ತೆ)