ಭುವಿಯಿಂದ ಹಿಡಿದು ಬಾನಿನವರೆಗೆ
ಬೆಂಗಳೂರು : ಉಡುಪಿ ಶ್ರೀಕೃಷ್ಣ ಮಠದ ಪೂಜೆಯಿಂದ ತಾವಾಗಿಯೇ ಹಿಂದೆ ಸರಿಯಬೇಕೆಂದು ಪುತ್ತಿಗೆ ಶ್ರೀಗಳಿಗೆ ಉಡುಪಿ ಮಠದ ಮಾಜಿ ಶ್ರೀಗಳಾಗ ಎಸ್.ಎಲ್.ರಾವ್ ಬೆಂಗಳೂರಿನಲ್ಲಿ ಶನಿವಾರ ಆಗ್ರಹಿಸಿದ್ದಾರೆ. ಪುತ್ತಿಗೆ ಶ್ರೀಗಳು ಸಾಗರೋಲ್ಲಂಘನ ಮಾಡಿದ್ದರಿಂದ ಅವರು ಮುಂದಿನ ಪರ್ಯಾಯದಲ್ಲಿ ಶ್ರೀಕೃಷ್ಣನ ಪೂಜೆ ಮಾಡಬಾರದೆಂದು ಅಷ್ಟಮಠಗಳ ಉಳಿದ ಮಠಗಳು ಕ್ಯಾತೆ ತೆಗೆದಿವೆ. 1969ರಲ್ಲೇ ಪೀಠವನ್ನು ತ್ಯಜಿಸಿದ್ದ ರಾವ್ 1954ರಿಂದ 1956ರವರೆಗೆ ಕೃಷ್ಣನಿಗೆ ಪೂಜೆ ಸಲ್ಲಿಸಿದ್ದರು.
***
ಕುಮಾರಸ್ವಾಮಿ ಇಂದು ಐಸಿಯುನಿಂದ ವಾರ್ಡ್ಗೆ
ಬೆಂಗಳೂರು : ಬುಧವಾರ ವೋಕ್ಹಾರ್ಟ್ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಡಾ.ವಿವೇಕ್ ಜವಳಿ ಶನಿವಾರ ತಿಳಿಸಿದರು. ಅವರನ್ನು ಐಸಿಯುನಿಂದ ಇಂದು ವರ್ಗಾಯಿಸಲಾಗುವುದು ಎಂದು ಅವರು ಹೇಳಿದರು. ಅಯೋರ್ಟಾದಲ್ಲಿ ರಕ್ತದ ಸರಾಗ ಹರಿವಿಗೆ ಜೋಡಿಸಲಾಗಿರುವ ವಾಲ್ವ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ರಕ್ತದೊತ್ತಡ ಸೇರಿದಂತೆ ಹೃದಯದ ಎಲ್ಲ ಅವಯವಗಳು ಸರಿಯಾಗಿ ಕೆಲಸ ಮಾಡುತ್ತಿವೆ ಎಂದು ಅವರು ನುಡಿದರು.
***
ರಾಷ್ಟ್ರಪಕ್ಷಗಳ ಕುರಿತು ಬಂಗಾರಪ್ಪ ಲೇವಡಿ
ಹುಬ್ಬಳ್ಳಿ : ದೇಶದಲ್ಲಿ ಪ್ರಾದೇಶಿಕ ಪಕ್ಷಗಳಿಗೂ ರಾಷ್ಟ್ರೀಯ ಪಕ್ಷಗಳಿಗೂ ಯಾವುದೇ ವ್ಯತ್ಯಾಸವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಮಾಜವಾದಿ ಪಕ್ಷದ ನಾಯಕ ಎಸ್. ಬಂಗಾರಪ್ಪ ಲೇವಡಿ ಮಾಡಿದ್ದಾರೆ. ಅವರು ಹುಬ್ಬಳ್ಳಿಯಲ್ಲಿ ಸಮಾಜವಾದಿ ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸದ ನಂತರ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡೆಸಿದ ಆಡಳಿತದಿಂದ ಬೇಸತ್ತಿರುವ ಜನತೆ ಸಮಾಜವಾದಿ ಪಕ್ಷದತ್ತ ನೋಡುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಮುಂದಿನ ಸರ್ಕಾರ ರಚಿಸುವ ಉತ್ತಮ ಅವಕಾಶವಿದೆ. ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಮತ್ತು ಎಲ್ಲ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು ಎಂದು ಅವರು ಹೇಳಿದರು.
***
ಬಿಬಿಎಂಪಿಗೆ ಕೇಂದ್ರದಿಂದ ಭಾರೀ ಅನುದಾನ
ಬೆಂಗಳೂರು : ನಗರದ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರದ ಜವಾಹರಲಾಲ್ ನೆಹರು ನ್ಯಾಷನಲ್ ಅರ್ಬನ್ ರಿನಿವಲ್ ಮಿಷನ್ ಯೋಜನೆಯಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 75 ಕೋಟಿ ರು. ಅನುದಾನ ದೊರೆತಿದೆ. ಬೆಂಗಳೂರು ರಿಪೋರ್ಟರ್ಸ್ ಗಿಲ್ಡ್ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಬಿಬಿಎಂಪಿ ಕಮಿಷನರ್ ಸುಬ್ರಮಣ್ಯಂ ಈ ಅನುದಾನದ ಬಗ್ಗೆ ತಿಳಿಸಿದರು. ಮತ್ತೊಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ಬಿಬಿಎಂಪಿ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲ ಮನೆ ಮಾಲಿಕರು ಅಭಿವೃದ್ಧಿ ಶುಲ್ಕವನ್ನು ನೀಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಇತರ ಪುರಸಭೆಗಳಾದ ಸಿಎಂಸಿ ಮತ್ತು ಬಿಡಿಪಿಗಳಿಗೆ ಶುಲ್ಕ ಸಲ್ಲಿಸಿದ್ದರೆ ಮತ್ತೆ ಬಿಬಿಎಂಪಿಗೆ ನೀಡಬೇಕಾಗಿಲ್ಲ ಎಂದು ಹೇಳಿದರು.
***
ಮಂಗಳ ಮೇಲೆ ಉಲ್ಕಾಪಾತ : ಭೂಮಿಗೆ ಹಾನಿಯಿಲ್ಲ
ಲಾಸ್ ಏಂಜಲೀಸ್ : 2008ರ ಜನವರಿಯಲ್ಲಿ ಮಂಗಳ ಗ್ರಹದ ಮೇಲೆ ಆಗಲಿರುವ ಉಲ್ಕಾಪಾತದಿಂದ ಭೂಮಿಯ ವಾತಾವರಣಕ್ಕೆ ಯಾವುದೇ ಹಾನಿ ಸಂಭವಿಸುವ ಸಾಧ್ಯತೆಯಿಲ್ಲ ಎಂದು ನಾಸಾ ಅಭಿಪ್ರಾಯಪಟ್ಟಿದೆ. ಜನವರಿ 30ರಂದು ಭಾರೀ ಗಾತ್ರದ ಉಲ್ಕೆ ಮಂಗಳ ಗ್ರಹಕ್ಕೆ ಡಿಕ್ಕಿ ಹೊಡೆಯಲಿದೆ ಎಂದು ನಾಸಾ ಲೆಕ್ಕ ಹಾಕಿದೆ.