ವರ್ಷದ ವೈವಿಧ್ಯ : ಕುಮಾರಕೃಪಾ ರಸ್ತೆಯಲ್ಲಿ ಬಣ್ಣದ ಓಕುಳಿ
ಬೆಂಗಳೂರು, ಡಿ.19 : ಚಿತ್ರಕಲಾ ಪರಿಷತ್ತಿನಲ್ಲಿ ಡಿ. 30ರಂದು ಚಿತ್ರಸಂತೆ. ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಸಾವಿರಕ್ಕೂ ಅಧಿಕ ಹವ್ಯಾಸಿ ಹಾಗೂ ವೃತ್ತಿನಿರತ ಕಲಾವಿದರು ಚಿತ್ರಸಂತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದು ಐದನೇ ವರ್ಷದ ಚಿತ್ರಸಂತೆಯಾಗಿದ್ದು, 10 ರೂ.ಗಳಿಂದ 1ಲಕ್ಷ ಬೆಲೆಬಾಳುವ ಕಲಾಕೃತಿಗಳು ಚಿತ್ರಸಂತೆಯಲ್ಲಿ ಮಾರಾಟಕ್ಕೆ ಲಭ್ಯವಾಗಲಿವೆ. ಕಳೆದ ವರ್ಷ 80ಲಕ್ಷ ರೂ. ಮೌಲ್ಯದ ಕಲಾಕೃತಿಗಳು ಮಾರಾಟವಾಗಿದ್ದವು. ಈ ಬಾರಿಯ ಚಿತ್ರಸಂತೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ. ಕಲಾವಿದರಿಗೆ ಉಚಿತ ಮಳಿಗೆಯನ್ನೂ ಒದಗಿಸಲಾಗಿದೆ ಎಂದು ಮಂಗಳವಾರ (ಡಿ.18) ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಟಿ.ಪ್ರಭಾಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚಿತ್ರಸಂತೆಗೆ ಹೊರ ರಾಜ್ಯದ ಕಲಾವಿದರು :
ಕೋಲ್ಕತ್ತಾ, ಚೆನ್ನೈ ಮೂಲದ ಹೊರ ರಾಜ್ಯದ ಕಲಾವಿದರೂ ಈ ಬಾರಿಯ ಚಿತ್ರಸಂತೆಯಲ್ಲಿ ಭಾಗವಹಿಸಲಿದ್ದಾರೆ. ಎಲ್ಲಾ ಕಲಾವಿದರನ್ನೂ ಒಂದೇ ವೇದಿಕೆಗೆ ಕರೆತಂದು ಪರಿಚಯಿಸಲಾಗುವುದು. ಚಿತ್ರಸಂತೆಯಲ್ಲಿ ಉದಯೋನ್ಮುಖ ಕಲಾವಿದರಿಗೆ ತಮ್ಮ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವ ಅವಕಾಶವಿರುತ್ತದೆ.
ಸಂತೆಯಲ್ಲಿ ವಿವಿಧ ಚಿತ್ರ ಶೈಲಿಗಳು :
ಸಾಂಪ್ರದಾಯಿಕ ಮೈಸೂರು ಶೈಲಿ, ತಂಜಾವೂರು, ರಾಜಸ್ಥಾನಿ, ಮಧುಬನಿ, ತೈಲ ಮತ್ತು ಜಲವರ್ಣದ ಚಿತ್ರಗಳೂ ಪ್ರದರ್ಶನಗೊಳ್ಳಲಿವೆ. ಜತೆಗೆ ಅಕ್ರಾಲಿಕ್, ಗಾಜಿನ ಮೇಲೆ ಬಿಡಿಸಿದ ಚಿತ್ತಾರಗಳು, ಕೊಲಾಜ್, ಲಿಥೋಗ್ರಾಫ್ ಚಿತ್ರಗಳನ್ನು ನೋಡಲು, ಕೊಳ್ಳಲು ಲಭ್ಯವಿವೆ. ಕ್ಷಣದಲ್ಲೇ ಭಾವಚಿತ್ರಗಳನ್ನು ಬಿಡಿಸಿಕೊಡುವ ಕಲಾವಿದರೂ ಚಿತ್ರಸಂತೆಯಲ್ಲಿ ಭಾಗವಹಿಸಲಿದ್ದಾರೆ.
(ದಟ್ಸ್ಕನ್ನಡ ವಾರ್ತೆ)