ಬೆಂಬಲಿಗರೊಂದಿಗೆ ಎಂ.ಪಿ.ಪ್ರಕಾಶ್ ಜೆಡಿಎಸ್ಗೆ ಟಾಟಾ
ಬೆಂಗಳೂರು, ಡಿ.12 : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಕಾರ್ಯವೈಖರಿಯನ್ನು ವಿರೋಧಿಸಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಕೊನೆಗೂ ಜಾತ್ಯತೀತ ಜನತಾದಳಕ್ಕೆ ರಾಜಿನಾಮೆ ನೀಡಿದ್ದಾರೆ.
ತಮ್ಮ ಈ ನಿರ್ಧಾರವನ್ನು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ಪ್ರಕಾಶ್, ತಾವು ಅತ್ಯಂತ ನೋವು ಮತ್ತು ಸಂಕಟದಿಂದ ಜನತಾದಳವನ್ನು ತೊರೆಯುತ್ತಿರುವುದಾಗಿ ಹೇಳಿದರು ಹಾಗು ಮುಂಬರುವ ದಿನಗಳಲ್ಲಿ ರಾಜಕೀಯ ಭವಿಷ್ಯವನ್ನು ನಿರ್ಧರಿಸುವುದಾಗಿ ಅವರು ನುಡಿದರು.
ಪ್ರಕಾಶ್ ಅವರೊಂದಿಗೆ ಗುರುತಿಸಿಕೊಂಡಿರುವ ವಿಸರ್ಜಿತ ವಿಧಾನಸಭೆಯ 10 ಸದಸ್ಯರು ಮತ್ತು ಇಬ್ಬರು ವಿಧಾನಪರಿಷತ್ ಸದಸ್ಯರು ಜನತಾದಳವನ್ನು ತೊರೆದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ 8 ಸದಸ್ಯರು ಉಪಸ್ಥಿತರಿದ್ದರೆ ಇನ್ನಿಬ್ಬರಾದ ಸಂತೋಷ್ ಲಾಡ್ ಮತ್ತು ರವಿಕಾಂತ್ ಪಾಟೀಲ್ ಅವರು ಪ್ರಕಾಶ್ ಅವರ ನಿರ್ಣಯವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು, ಮಹದೇವ್ ಪ್ರಸಾದ್, ಶರಣಬಸವ ದರ್ಶನಾಪೂರ, ಎಂ.ವೈ.ಪಾಟೀಲ್, ಬಿ.ಸಿ.ಪಾಟೀಲ್, ಕೆ.ರಾಜಣ್ಣ, ಬಾಲಚಂದ್ರ, ರಾಜುಗೌಡ, ಅಮರೇಗೌಡ ಬಯ್ಯಾಪುರ ಮತ್ತು ಪರಿಷತ್ ಸದಸ್ಯರಾದ ಚಿದಾನಂದ್ ಹಾಗು ಬಿ.ಟಿ.ಚನ್ನಬಸಪ್ಪ.
ತಮ್ಮ ಬೆಂಬಲಿಗರು ಮತ್ತು ಮಾಜಿ ಸದಸ್ಯರೊಡನೆ ಮಾತುಕತೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬಂದಿರುವುದಾಗಿ ಪ್ರಕಾಶ್ ತಿಳಿಸಿದರು. ಮುಂಬರುವ ಚುನಾವಣೆ ಮತ್ತು ಮುಂದಿನ ನಡೆ ಕುರಿತಂತೆ ತಮಗೆ ನಿರ್ಣಯ ಕೈಗೊಳ್ಳಲು ಸಭೆ ಸರ್ವಾನುಮತದ ಒಪ್ಪಿಗೆ ನೀಡಿದೆ ಎಂದು ಅವರು ನುಡಿದರು.
ಜೊತೆಗೆ ಬೇರೆ ಪಕ್ಷವನ್ನು ಹುಟ್ಟುಹಾಕುವ ಯೋಜನೆಯನ್ನು ಅವರು ಸಾರಾಸಗಟಾಗಿ ತಳ್ಳಿಹಾಕಿದರು. ಹೊಸ ಪಕ್ಷ ರಚಿಸುವ ಯೋಚನೆ ಮತ್ತು ಯೋಜನೆ ತಮಗೆ ಮತ್ತು ತಮ್ಮ ಬೆಂಬಲಿಗರಿಗೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಕಾಂಗ್ರೆಸ್ ಅಥವ ಬಿಜೆಪಿಯನ್ನು ಸೇರುವ ವದಂತಿಯನ್ನು ಅವರು ತಳ್ಳಿಹಾಕಲೂ ಇಲ್ಲ.
(ಯುಎನ್ಐ)