500ರೂ.ಪಾವತಿಸಿ ಅಪರೂಪದ ಚಲನಚಿತ್ರಗಳ ವೀಕ್ಷಿಸಿ
ಬೆಂಗಳೂರು, ಡಿ.12 : ಜ.3ರಿಂದ 10ರವರೆಗೆ ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಚಿತ್ರೋತ್ಸವದ ನೇತೃತ್ವ ವಹಿಸಲಿದ್ದಾರೆ.
ಚಲನಚಿತ್ರೋತ್ಸವದಲ್ಲಿ 50ದೇಶಗಳ 125ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶಿತವಾಗಲಿವೆ. ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಆಯೋಜಿಸುತ್ತಿರುವ ಕಾರ್ಯಕ್ರಮಕ್ಕೆ ರಾಜ್ಯ ಸರಕಾರವೂ ಕೈಜೋಡಿಸಿದೆ. ಚಿತ್ರೋತ್ಸವದಲ್ಲಿ ಕೇವಲ 500ರೂ.ಕೊಟ್ಟು 125ಕ್ಕೂ ಹೆಚ್ಚಿನ ಅಪರೂಪದ ಚಿತ್ರಗಳನ್ನು ವೀಕ್ಷಿಸಬಹುದು. ಸಿನಿಮಾ ಶಿಕ್ಷಣ ಸಂಸ್ಥೆ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ 300ರೂ. ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸುಚಿತ್ರ ಫಿಲಂ ಸೊಸೈಟಿಯನ್ನು ಸಂಪರ್ಕಿಸಬಹುದು (ದೂ : 2671 1785). ಅಂತರ್ಜಾಲ ತಾಣ : www.suchitrafest.in
ಚಿತ್ರೋತ್ಸವಕ್ಕೆ ರಾಜ್ಯ ಸರಕಾರ 10ಲಕ್ಷ ರೂ. ಬಿಡುಗಡೆ ಮಾಡಿದೆ. ಹೆಚ್ಚುವರಿಯಾಗಿ 15ಲಕ್ಷ ಬಿಡುಗಡೆ ಮಾಡುವುದಾಗಿ ವಾರ್ತಾ ಇಲಾಖೆಯ ಕಾರ್ಯದರ್ಶಿ ಐ.ಎಂ. ವಿಠಲಮೂರ್ತಿ ಮಂಗಳವಾರ (ಡಿ.11) ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹಾಗೆಯೇ ಕೇಂದ್ರ ಸರಕಾರದ ಸಹಾಯ ಧನಕ್ಕೂ ಮನವಿ ಸಲ್ಲಿಸಲಾಗಿದೆ. ಮುಂದಿನ ವರ್ಷದಿಂದ ಬೆಂಗಳೂರು ಚಿತ್ರೋತ್ಸವಕ್ಕೂ ಕೇಂದ್ರ ಸರಕಾರದ ಹಣ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.
ಚಿತ್ರೋತ್ಸವದ ವಿಶೇಷಗಳು :
*ಕನ್ನಡದ ಕಾಡ ಬೆಳದಿಂಗಳು, ಮೊಗ್ಗಿನ ಜಡೆ, ದಾಟು, ಮೈಸೂರು ಮಲ್ಲಿಗೆ ಚಿತ್ರಗಳು ಪ್ರದರ್ಶನ ಕಾಣಲಿವೆ.
*ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಚಿತ್ರಗಳ ತುಣುಕುಗಳನ್ನು ಪ್ರದರ್ಶಿಸುವ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.
*ಗಿರೀಶ್ ಕಾಸರವಳ್ಳಿ ಕುರಿತ ಆಂಗ್ಲ ಪುಸ್ತಕ (ಲೇಖಕರು : ಮನು ಚಕ್ರವರ್ತಿ), ಹಿರಿಯ ನಿರ್ದೇಶಕ ಎಂ.ಆರ್.ವಿಠಲ್ ಅವರ ಜೀವನ ಚರಿತ್ರೆ (ಲೇ : ಎನ್.ಎಸ್. ಶ್ರೀಧರ ಮೂರ್ತಿ) ಪುಸ್ತಕಗಳು ಲೋಕಾರ್ಪಣೆಯಾಗಲಿವೆ.
*ಆಸ್ಕರ್ ಪ್ರಶಸ್ತಿ ವಿಜೇತ 'ಲೈಫ್ ಆಫ್ ಅದರ್ಸ್" ಹಾಗೂ 'ವಾಲ್" ಚಿತ್ರಗಳೂ ಪ್ರದರ್ಶನ ಕಾಣಲಿವೆ.
(ದಟ್ಸ್ಕನ್ನಡ ವಾರ್ತೆ)