ಕೇಂದ್ರ ಸಂಪುಟಕ್ಕೆ ಎಸ್.ಎಂ.ಕೃಷ್ಣ ಎತ್ತಂಗಡಿ?
ಬೆಂಗಳೂರು, ನ.29 : ವಿಧಾನಸಭೆಯ ಮಧ್ಯಂತರ ಚುನಾವಣೆಗೆ ಪೂರಕವಾಗಿ ಕೆಪಿಸಿಸಿ ಡಿಸೆಂಬರ್ ತಿಂಗಳಲ್ಲಿ ಪುನರಚನೆಯಾಗಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಪ್ರವೀಣ್ ದಾವರ್ ತಿಳಿಸಿದ್ದಾರೆ.
ಪ್ರಮುಖ ಸಮುದಾಯಗಳಾಗಿರುವ ಒಕ್ಕಲಿಗ ಹಾಗೂ ಲಿಂಗಾಯತ ಜನಾಂಗಕ್ಕೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಪ್ರವೀಣ್ ದಾವರ್ ಗುರುವಾರ(ನ.29) ಸಂಜೆ ಸುದ್ದಿಗಾರರಿಗೆ ತಿಳಿಸಿದರು. ಕಾಂಗ್ರೆಸ್ ಈಗಾಗಲೇ ಚುನಾವಣಾ ಸಿದ್ದತೆಯಲ್ಲಿದೆ. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಪರ ಅನುಕಂಪ ವ್ಯಕ್ತವಾಗುವುದನ್ನು ತಳ್ಳಿ ಹಾಕಿದ ಅವರು, ಕಾಂಗ್ರೆಸ್ ಪಕ್ಷವು ಬಹುಮತ ಗಳಿಸುವುದು ನಿಶ್ಚಿತ. ಜೆಡಿಎಸ್ನ ಬಂಡಾಯ ಅಭ್ಯರ್ಥಿಗಳು ಕಾಂಗ್ರೆಸ್ನೊಂದಿಗೆ ಸರಕಾರ ರಚಿಸಲು ಮುಂದಾಗಿದ್ದರು ಎಂಬ ವಿಚಾರವನ್ನು ಅಲ್ಲಗಳೆದಿದ್ದಾರೆ.
ಹಾಗೆಯೇ ಕೇಂದ್ರ ಸಚಿವ ಸಂಪುಟವೂ ವಿಸ್ತರಣೆಯಾಗಲಿದೆ ಎಂದು ವರ್ತಮಾನಗಳು ಹೇಳುತ್ತವೆ. ಇದೇ ವೇಳೆ, ಮಹಾರಾಷ್ಟ್ರ ರಾಜ್ಯಪಾಲರಾದ ಎಸ್.ಎಂ.ಕೃಷ್ಣ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಬಹುದೆಂದು ದೆಹಲಿಯ ಉನ್ನತ ಮೂಲಗಳು ತಿಳಿಸಿವೆ ಎಂದು ಬೆಂಗಳೂರಿನ ಸಂಜೆ ಪತ್ರಿಕೊಂದು ವರದಿ ಮಾಡಿದೆ. ವರ್ಚಸ್ವಿ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆಯಂತೆ. ಆ ರೀತಿ ಅವರ ಕಣ್ಣಿಗೆ ಕಾಣುತ್ತಿರುವ ವರ್ಚಸ್ವಿ ರಾಜಕಾರಣಿ ಎಂದರೆ ಎಸ್.ಎಂ.ಕೃಷ್ಣ. ಹಾಗಾಗಿ ಅವರು ಸಂಪುಟ ಸೇರುವುದು ಖಚಿತ ಎನ್ನುತ್ತಾರೆ ಕಾರಿಡಾರ್ ವರದಿಗಾರರು.
ಕೆ.ಎಚ್.ಮುನಿಯಪ್ಪ, ಎಂ.ವಿ.ರಾಜಶೇಖರನ್, ಆಸ್ಕರ್ ಫರ್ನಾಂಡೀಸ್ ಕೇಂದ್ರದಲ್ಲಿ ಸಹಾಯಕ ಸಚಿವರು. ಕೇಂದ್ರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಿಲ್ಲದ ಕಾರಣ ಆ ಸ್ಥಾನವನ್ನು ತುಂಬಲು ಎಸ್.ಎಂ.ಕೃಷ್ಣರ ಕಡೆ ಒಲವು ವ್ಯಕ್ತವಾಗಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.
(ದಟ್ಸ್ಕನ್ನಡ ವಾರ್ತೆ)