ಕಾಂಗ್ರೆಸ್ ನ ಶಾಮನೂರು ಶಿವಶಂಕರಪ್ಪನವರಿಗೆ ಪತ್ನಿ ವಿಯೋಗ
ದಾವಣಗೆರೆ, ನ.29 : ದಾವಣಗೆರೆ ಶಾಸಕ, ಕೆಪಿಸಿಸಿ ಖಜಾಂಚಿ ಶಾಮನೂರು ಶಿವಶಂಕರಪ್ಪ ಅವರ ಪತ್ನಿ ಪಾರ್ವತಮ್ಮ(73) ಬುಧವಾರ ಬೆಳಗ್ಗೆ 10.10ರ ಸುಮಾರಿನಲ್ಲಿ ನಿಧನ ಹೊಂದಿದರು.
ಚನ್ನಗಿರಿ ತಾಲೂಕಿನ ವಡ್ನಾಳ್ ಗ್ರಾಮದ ರುದ್ರಪ್ಪ ಹಾಗೂ ಪುಟ್ಟಮ್ಮ ದಂಪತಿಗಳ ನಾಲ್ಕನೆಯ ಪುತ್ರಿಯಾಗಿದ್ದ ಪಾರ್ವತಮ್ಮ, ಶಿವಶಂಕರಪ್ಪ ಅವರೊಂದಿಗೆ ದಾಂಪತ್ಯ ಜೀವನದ 51 ವಸಂತಗಳನ್ನು ಕಂಡವರು. ಶಾಸಕ ಎಸ್ಸೆಸ್ರ ಸಾಧನೆಗೆ ಬೆನ್ನುಲುಬಾಗಿ ನಿಂತ ಹೆಣ್ಣುಮಗಳು. ಕಳೆದ 3 ತಿಂಗಳಿಂದ ಅವರು ನರರೋಗಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕಾಗಿ ಅವರಿಗೆ ಚೀನಾ ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. 2-3 ದಿನದ ಹಿಂದಷ್ಟೇ ಪಾರ್ವತಮ್ಮ ತಮ್ಮ ಬೆಂಗಳೂರಿನ ಮನೆಯಿಂದ ದಾವಣಗೆರೆ ಮನೆಗೆ ಬಂದಿದ್ದರು.
ಮೃತರು ಪುತ್ರರಾದ ಮಾಜಿ ಸಚಿವ ಮಲ್ಲಿಕಾರ್ಜುನ್, ಉದ್ಯಮಿಗಳಾದ ಗಣೇಶ್, ಬಕ್ಕೇಶ್, ಪುತ್ರಿಯರಾದ ಡಾ.ಮಂಜುಳಾ, ಡಾ.ಶೈಲಜಾ ಅರ್ಪಣ ಭಟ್ಟಾಚಾರ್ಯ. ಸುಧಾ ರಾಜೇಂದ್ರ ಪಾಟೀಲ್, ಮೀನಾ ಶರಣ್ ಪಾಟೀಲ್ ಅವರನ್ನು ಅಗಲಿದ್ದಾರೆ.
(ದಟ್ಸ್ಕನ್ನಡ ವಾರ್ತೆ)