ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ: ಕಿವಿ ಕೊಡದ ಕೇಂದ್ರ ಸರ್ಕಾರ
ಬೆಂಗಳೂರು, ನ.22 : ಎಲ್ಲರೂ ಕೇಳುತ್ತಲೇ ಇದ್ದಾರೆ.. ಆದರೆ ಕೇಂದ್ರ ಸರ್ಕಾರ ಮಾತ್ರ ಇತ್ತ ಗಮನ ಹರಿಸಿಲ್ಲ. ಶಾಸ್ತ್ರೀಯ ಸ್ಥಾನಮಾನ ಪಡೆವ ಎಲ್ಲಾ ಅರ್ಹತೆಯಿದ್ದರೂ, ಕನ್ನಡ ಭಾಷೆ ಕೇಂದ್ರದವರ ಕಣ್ಣಿಗೆ ಕಾಣುತ್ತಿಲ್ಲ. ಈಗ ವಿಧಾನ ಪರಿಷತ್ ಸಭಾಪತಿ ಪ್ರೊ.ಬಿ.ಕೆ.ಚಂದ್ರಶೇಖರ್ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ನೀಡುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ನ.1ರಂದು ಕನ್ನಡಕ್ಕೆ ಶ್ರಾಸ್ತ್ರೀಯ ಸ್ಥಾನಮಾನ ಸಿಗುತ್ತದೆಂದು ರಾಜ್ಯದ ಜನತೆ ನಿರೀಕ್ಷಿಸಿದ್ದರು. ನಿರೀಕ್ಷೆ ಸುಳ್ಳಾಗಿದೆ. ನವೆಂಬರ್ ಅಂತ್ಯದೊಳಗಾದರೂ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನದ ಆದೇಶ ಹೊರಡಿಸಿದರೆ ಕನ್ನಡಿಗರಿಗೆ ಬಹುದೊಡ್ಡ ಉಡುಗೊರೆ ನೀಡಿದಂತಾಗುತ್ತದೆ. ಶಾಸ್ತ್ರೀಯ ಭಾಷೆಯ ಸ್ಥಾನಮಾನ ಹಾಗೂ ಕನ್ನಡ ಭಾಷೆಗೆ ಆಗಿರುವ ಅನ್ಯಾಯ ಕುರಿತು ಪ್ರೊ ಬಿಕೆಸಿ ಪ್ರಧಾನಿ ಅವರ ಗಮನಕ್ಕೆ ತಂದಿದ್ದಾರೆ.
ಕ್ರಿ.ಶ 2ನೇ ಶತಮಾನದ 'ಶಿಲಪ್ಪದಿಗಾರಂ" ಎಂಬ ತಮಿಳು ಗ್ರಂಥದಲ್ಲಿ ಕನ್ನಡ ಪದ ಬಳಕೆಯಾಗಿದೆ. ಹರಪ್ಪ ಮತ್ತು ಮೆಹೆಂಜೊದಾರೋ ನಾಗರಿಕತೆ ಕಾಲದಲ್ಲೂ ಕನ್ನಡ ಲಿಪಿ ಬಳಸಿರುವ ಬಗ್ಗೆ ಉಲ್ಲೇಖವಿದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವುದರಿಂದ ಕೇಂದ್ರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ನೀಡಲೇಬೇಕೆಂದು ಪ್ರಧಾನಿ ಅವರಿಗೆ ಬರೆದಿರುವ ಪತ್ರದಲ್ಲಿ ಪ್ರೊ.ಬಿಕೆಸಿ ತಿಳಿಸಿದ್ದಾರೆ.
(ಯುಎನ್ಐ)