ಶಾಸಕಿ ಪರಿಮಳಾ ನಾಗಪ್ಪ ಅಳಿಯ ಕಿರಣ್ ಸಾವಿಗೆ ಕಾರಣ?
ಬೆಂಗಳೂರು, ನ21 : ಶಾಸಕಿ ಪರಿಮಳಾ ನಾಗಪ್ಪ(ಕಾಡುಗಳ್ಳ ವೀರಪ್ಪನ್ ನಿಂದ ಹತ್ಯೆಗೊಳಗಾದ ಮಾಜಿ ಸಚಿವ ನಾಗಪ್ಪ ಅವರ ಪತ್ನಿ) ಅವರ ಅಳಿಯ ಡಾ.ಕಿರಣ್ ಪಟೇಲ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸರು ಬುಧವಾರ(ನ.21) ತನಿಖೆಯನ್ನು ಬಿರುಸುಗೊಳಿಸಿದ್ದಾರೆ.
ಸಂಜಯನಗರದ ಭೂಪಸಂದ್ರದ ನಿವಾಸದಲ್ಲಿ ಮಂಗಳವಾರ(ನ.20) ಬೆಳಗ್ಗೆ ಡಾ.ಕಿರಣ್ (34) ಮೃತಪಟ್ಟಿದ್ದಾರೆ. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಿರಣ್ ಅವರ ತಂದೆ ಪ್ರೊ.ಪಟೇಲ್, ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸೋಮವಾರ ಸ್ನೇಹಿತರೊಡನೆ ಪಾನಮತ್ತರಾಗಿ ಮನೆಗೆ ಬಂದ ಡಾ.ಕಿರಣ್, ಬೆಳಗ್ಗೆ ಎಂದಿನಂತೆ ಏಳದಿದ್ದಾಗ ಗಾಬರಿಗೊಂಡ ಅವರ ಪತ್ನಿ ಪ್ರಿಯಾಂಕಾ , ಪ್ರೊ. ಪಟೇಲ್ , ಸೋದರ ಪ್ರೀತಂ ಕೊಲಂಬಿಯಾ ಏಶಿಯಾ ಆಸ್ಪತ್ರೆಗೆ ದಾಖಲಿಸಿದರು.
ಆದರೆ ಕಿರಣ್ ಅವರನ್ನು ಪರೀಕ್ಷಿಸಿದ ವೈದ್ಯರರು ಮೃತಪಟ್ಟಿರುವುದನ್ನು ಖಚಿತಪಡಿಸಿದರು. ವೀರಪ್ಪನ್ ನಿಂದ ಮಾಜಿ ಸಚಿವ ನಾಗಪ್ಪ ಅವರ ಅಪಹರಣ ಹಾಗೂ ಹತ್ಯೆ ನಡೆದ ನಂತರ, ನಾಗಪ್ಪನವರ ಕುಟುಂಬ ಹಾಗೂ ಸರ್ಕಾರದೊಡನೆ ಡಾ.ಕಿರಣ್ ಸಂಪರ್ಕ ಸೇತುವಾಗಿದ್ದರು.
(ದಟ್ಸ್ ಕನ್ನಡ ವಾರ್ತೆ)