ಬೇರೆ ದಾರಿಯಿಲ್ಲದೇ ರಾಜೀನಾಮೆ ಕೊಟ್ಟರು ಯಡಿಯೂರಪ್ಪ
ಬೆಂಗಳೂರು, ನ.19 : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ(ನ.19) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಜೆಡಿಎಸ್ ಅಸಹಕಾರದಿಂದ ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತು ಪಡಿಸಲು ಸಾಧ್ಯವಾಗದ ಕಾರಣ ಅವರು, ರಾಜ್ಯಪಾಲ ರಾಮೇಶ್ವರ ಠಾಕೂರು ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ನ.12ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜೀನಾಮೆಯಿಂದಾಗಿ ಏಳು ದಿನಗಳ ಅವರ ಅಧಿಕಾರವಧಿ ಮುಕ್ತಾಯವಾಗಿದೆ. ದಕ್ಷಿಣ ಭಾರತದಲ್ಲಿ ಅಧಿಕಾರದ ಖಾತೆ ತೆರೆಯುವ ಬಿಜೆಪಿಯ ಕನಸು, ಭಗ್ನವಾಗಿದೆ. ದೇವೇಗೌಡರ ವಿರುದ್ಧ ಯಡಿಯೂರಪ್ಪ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ವಿರೋಧಿಸಿ ಮತ ಚಲಾಯಿಸುವಂತೆ ಜೆಡಿಎಸ್ ವಿಪ್ ಜಾರಿ ಮಾಡಿತ್ತು. ಜೆಡಿಎಸ್ ಷರತ್ತುಗಳ ಒಪ್ಪಿ ಛಾಪಾ ಕಾಗದ ಮೇಲೆ ಸಹಿ ಮಾಡದೇ ಇರುವುದು ದೇವೇಗೌಡರಿಗೆ ಸಿಟ್ಟು ತರಿಸಿತ್ತು. ಷರತ್ತುಗಳು ಮತ್ತು ಪ್ರಮುಖ ಖಾತೆಗಳ ಹಂಚಿಕೊಳ್ಳಲು ಬಿಜೆಪಿ ಸಿದ್ಧವಿರಲಿಲ್ಲ. ಈ ಮಧ್ಯೆ ಮಹಿಮಾ ಪಟೇಲ್ ರಾಜೀನಾಮೆ ಅಂಗೀಕಾರವಾಗಿದೆ.
224ಸದಸ್ಯರ ವಿಧಾನಸಭೆಯಲ್ಲಿ ಪಕ್ಷಗಳ ಬಲಾ ಬಲ : ಬಿಜೆಪಿ 79, ಜೆಡಿಎಸ್ 58(ಸಿದ್ದರಾಮಯ್ಯ ಬಣವೂ ಸೇರಿದಂತೆ), ಕಾಂಗ್ರೆಸ್ 64, ಜೆಡಿಯು 5, ವಾಟಾಳ್, ಕನ್ನಡನಾಡು , ಸಿಪಿಎಂ ಮತ್ತು ಆರ್ ಪಿಐ ತಲಾ ಒಂದೊಂದು ಸ್ಥಾನ, ಪಕ್ಷೇತರರು 13, ವಿಧಾನಸಭಾಧ್ಯಕ್ಷ .
(ದಟ್ಸ್ ಕನ್ನಡ ವಾರ್ತೆ)