ಪಟ್ಟು ಬಿಡದ ದೇವೇಗೌಡ; ಯಡಿಯೂರಪ್ಪ ರಾಜೀನಾಮೆ?
ಬೆಂಗಳೂರು, ನ.19 : ಜೆಡಿಎಸ್ ನಾಯಕರ ಷರತ್ತುಗಳಿಗೆ ಬಿಜೆಪಿ ಸೊಪ್ಪು ಹಾಕಿಲ್ಲ. ಈ ಪರಿಣಾಮ ಸರ್ಕಾರದ ವಿರುದ್ಧ ಜೆಡಿಎಸ್ ಮತ ಚಲಾಯಿಸುವುದು ಸ್ಪಷ್ಟವಾಗಿದೆ. ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ದೇವೇಗೌಡರು ಹೇಳಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಯಡಿಯೂರಪ್ಪ ಅವರಿಗೆ, ಬಿಜೆಪಿ ಹೈಕಮಾಂಡ್ ಸೋಮವಾರ(ನ.19)ಸೂಚನೆ ನೀಡಿದೆ.
ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ ಸಿಂಗ್ ಕರ್ನಾಟಕದ ರಾಜಕೀಯ ಬೆಳವಣಿಗೆಗಳನ್ನು ವೀಕ್ಷಿಸುತ್ತಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋದರೆ, ರಾಜೀನಾಮೆ ನೀಡುವಂತೆ ಅವರು ಯಡಿಯೂರಪ್ಪ ಅವರಿಗೆ ನಿರ್ದೇಶನ ನೀಡಿದ್ದಾರೆ.
ಸೋಮವಾರ ಬೆಳಗ್ಗೆ 9ಗಂಟೆಯೊಳಗೆ ಷರತ್ತು ಪತ್ರಕ್ಕೆ ಸಹಿ ಹಾಕುವಂತೆ ಜೆಡಿಎಸ್ ಗಡುವು ನೀಡಿತ್ತು. ಒಂದು ವೇಳೆ ಈಗ ಸಹಿ ಹಾಕಿದರೂ, ಸರ್ಕಾರಕ್ಕೆ ಬೆಂಬಲನೀಡುವುದಿಲ್ಲ ಎಂದು ದೇವೇಗೌಡರು ಸ್ಪಷ್ಟವಾಗಿ ಹೇಳಿದ್ದಾರೆ. ಮತ್ತೊಂದು ಕಡೆ ಜೆಡಿಎಸ್ ಮತ್ತು ಕಾಂಗ್ರೆಸ್ ಮರುಮೈತ್ರಿಯ ಪ್ರಯತ್ನಗಳು ತೆರೆಮರೆಯಲ್ಲಿ ಚಿಗುರಿವೆ.
(ದಟ್ಸ್ ಕನ್ನಡ ವಾರ್ತೆ)