ಬುಧವಾರ ತಲಕಾವೇರಿಯಲ್ಲಿ ಉಗಮವಾಗಲಿದೆ ಹೊಸಪಕ್ಷ!
ಬೆಂಗಳೂರು, ನ.13 : ಮಹಿಮಾ ಪಟೇಲ್ರ ಹೊಸ ರಾಜಕೀಯಪಕ್ಷ 'ಸುವರ್ಣಯುಗ" ಬುಧವಾರ (ನ.14) ತಲಕಾವೇರಿಯಲ್ಲಿ ಶುಭಾರಂಭವಾಗಲಿದೆ.
ಶಾಸಕ ಸ್ಥಾನಕ್ಕೆ ಸೋಮವಾರ(ನ.12) ರಾಜೀನಾಮೆ ನೀಡಿದ್ದೇನೆ. ಸಮೃದ್ಧ ಹಾಗೂ ಆರೋಗ್ಯಪೂರ್ಣ ಕರ್ನಾಟಕ ನಿರ್ಮಾಣದ ಕನಸನ್ನು ನನಸು ಮಾಡುವ ಸಿದ್ಧಾಂತಕ್ಕೆ ಬದ್ಧವಾಗಿ ಪಕ್ಷ ಕಟ್ಟುತ್ತಿರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ನ.14 ಮಕ್ಕಳ ದಿನಾಚರಣೆ. ಅಂದು ಬೆಳಗ್ಗೆ 11 ಗಂಟೆಗೆ ಸಮೃದ್ಧತೆ, ಪಾವಿತ್ರ್ಯತೆ ಮತ್ತು ಸಮಗ್ರತೆಯ ಸಂಕೇತವಾಗಿ ತಲಕಾವೇರಿಯಲ್ಲಿ ಪಕ್ಷ ಉದ್ಘಾಟನೆಯಾಗಲಿದೆ. ಕುದುರೆ ಇಲ್ಲಾ ಚಿನ್ನದ ಹದ್ದನ್ನು ಪಕ್ಷದ ಚಿನ್ಹೆಯಾಗಿ ಕೇಳಬೇಕೆಂದಿದ್ದೇನೆ. ಪ್ರಾಣಿ, ಪಕ್ಷಿಗಳ ಚಿನ್ಹೆ ಕೊಡಲು ಚುನಾವಣಾ ಆಯೋಗ ಒಪ್ಪುತ್ತದೋ ಇಲ್ಲವೋ ತಿಳಿದಿಲ್ಲ. ಒಂದು ವೇಳೆ ಕುದುರೆ ಚಿನ್ಹೆ ಸಿಕ್ಕರೆ, ಕುದುರೆ ಮೇಲೆ ಕುಳಿತು ಹಳ್ಳಿಹಳ್ಳಿಗೆ ತಿರುಗಿ ಪ್ರಚಾರ ಮಾಡುತ್ತೇನೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪೌಷ್ಠಿಕ ಆಹಾರ ತಜ್ಞೆ ಡಾ.ಉಷಾ ಕುಲಕರ್ಣಿ, ಇಂಜಿನಿಯರ್ ಬಾಲಕೃಷ್ಣ, ಮಾನವನ ವ್ಯಕ್ತಿತ್ವ ವಿಕಸನ ತಜ್ಞ ದಿವಾಕರ್, ರಿಯಲ್ ಎಸ್ಟೇಟ್ ಉದ್ಯಮಿ ರಾಜೇಂದ್ರ, ಉದ್ಯಮಿ ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.
(ದಟ್ಸ್ಕನ್ನಡ ವಾರ್ತೆ)