ಡೆಪ್ಯೂಟಿ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟ ರೇವಣ್ಣ ಈಗ ವಿಲನ್?
ಬೆಂಗಳೂರು, ನ.08 : ಕೂಸು ಹುಟ್ಟುವ ಮುನ್ನವೇ ಕುಲಾವಿ ಸಿದ್ಧಪಡಿಸಲಾಗುತ್ತಿದೆ. ಉಪಮುಖ್ಯಮಂತ್ರಿ ಸ್ಥಾನಕ್ಕೆ ಹೆಚ್.ಡಿ.ರೇವಣ್ಣ ಅವರನ್ನು ತರಲು ಹೆಚ್.ಡಿ.ದೇವೇಗೌಡ ಮುಂದಾಗಿದ್ದಾರೆ. ಆದರೆ ಜೆಡಿಎಸ್ ಶಾಸಕರಿಗೆ ಈ ಬಗ್ಗೆ ಒಲವಿಲ್ಲ.
ಪಕ್ಷದ ಶಾಸಕರ ಜೊತೆ ಬೆರೆಯುವ ಕುಮಾರಸ್ವಾಮಿ ಅವರೇ ಉಪಮುಖ್ಯಮಂತ್ರಿಯಾಗಲಿ. ಮುಖ್ಯಮಂತ್ರಿಯಾದವರು, ಉಪಮುಖ್ಯಮಂತ್ರಿಯಾಗಬಾರದು ಎಂಬ ಕಾನೂನು ಎಲ್ಲೂ ಇಲ್ಲ. ಹೀಗಾಗಿ ಕುಮಾರಣ್ಣ ನಮ್ಮ ಒತ್ತಾಯಕ್ಕೆ ಒಪ್ಪಲಿ ಎಂಬುದು ಜೆಡಿಎಸ್ ಶಾಸಕರ ಅಭಿಪ್ರಾಯ.
ರೇವಣ್ಣ ಮತ್ತು ಅವರ ಪತ್ನಿ ಭವಾನಿ, ದೇವೇಗೌಡರನ್ನು ಬೇಟಿ ಮಾಡಿ ಒತ್ತಡ ಹಾಕಿದ್ದಾರೆ. ಮೊದಲಿನಿಂದಲೂ ನಿಮ್ಮ ಜೊತೆ ಇದ್ದವರು ರೇವಣ್ಣ. ಆದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಈಗ ರೇವಣ್ಣನಿಗೆ ಉಪಮುಖ್ಯಮಂತ್ರಿ ಸ್ಥಾನವಾದರೂ ಸಿಗಲಿ ಎಂದು ಭವಾನಿ ಒತ್ತಾಯಿಸಿದರು ಎನ್ನಲಾಗಿದೆ. ಆರಂಭದಿಂದಲೂ ಕಾಂಗ್ರೆಸ್ ಜೊತೆ ಸಖ್ಯ ಮಾಡಲು ಆಸಕ್ತಿ ವಹಿಸಿದ್ದ ರೇವಣ್ಣಗೆ, ಬಿಜೆಪಿ ಮೈತ್ರಿ ಇಷ್ಟವಾಗಿಲ್ಲ.
ಜೆಡಿಎಸ್ ಪಕ್ಷದಲ್ಲಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಮೆರಾಜುದ್ದೀನ್ ಪಟೇಲ್, ವೈ.ಎಸ್.ದತ್ತ, ಎಂ.ಪಿ.ಪ್ರಕಾಶ್(ಅವರು ಒಪ್ಪಿದರೆ?) ಹೆಸರುಗಳು ಕೇಳಿ ಬರುತ್ತಿವೆ. ಉಪಮುಖ್ಯಮಂತ್ರಿ ಸ್ಥಾನ ಸಿಗದಿದ್ದರೇ, ಹೊಸ ಸರ್ಕಾರ ರಚನೆಗೆ ಅಡ್ಡಿ ಪಡಿಸಲು ರೇವಣ್ಣ ಮುಂದಾಗಿದ್ದಾರೆ. ಅವರನ್ನು ನಾಲ್ವರು ಶಾಸಕರು ಬೆಂಬಲಿಸಿದ್ದಾರೆ ಎನ್ನಲಾಗಿದೆ.
ರಾಷ್ಟ್ರಪತಿ ಆಡಳಿತ ಅಂತ್ಯಗೊಂಡ ಸುದ್ದಿ ತಿಳಿದ ಕೂಡಲೇ ಜೆಡಿಎಸ್ ಮತ್ತು ಬಿಜೆಪಿ ಪಾಳಯದಲ್ಲಿ ಚಟುವಟಿಕೆಗಳು ಬಿರುಸಾಗಿವೆ. ನವದೆಹಲಿಯಲ್ಲಿ ಕೂತಿರುವ ಯಡಿಯೂರಪ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)