ಪುತ್ತಿಗೆ ಶ್ರೀಗಳಿಗೆ ಉಡುಪಿ ಕೃಷ್ಣನ ಪೂಜಿಸುವ ಹಕ್ಕಿಲ್ಲವಂತೆ!
ಉಡುಪಿ, ನ.03 : ವಿದೇಶ ಪ್ರವಾಸ ಕೈಗೊಂಡ ಕಾರಣದಿಂದ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಲು ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಗೆ ಅರ್ಹತೆಯಿಲ್ಲ. ಅವರು ಸಂಪ್ರದಾಯ ಮುರಿದಿದ್ದಾರೆ. ಕೃಷ್ಣನ ಪೂಜಿಸುವ ಅಧಿಕಾರವನ್ನು ಅವರಿಗೆ ನೀಡಬಾರದು ಎಂಬ ಮಾತುಗಳು ಕೇಳಿ ಬಂದಿವೆ. ಈ ವಿಚಾರದ ಬಗ್ಗೆ ಅಷ್ಟ ಮಠಾಧೀಶರಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.
ಸುಗುಣೇಂದ್ರ ಶ್ರೀಗಳ ಅನುಪಸ್ಥಿತಿಯಲ್ಲಿ ಈ ಬಗ್ಗೆ ಅಷ್ಟ ಮಠಾಧೀಶರು ಸಭೆ ನಡೆಸಿದರು. ಕೃಷ್ಣಮಠದ ಆಡಳಿತ ಜವಾಬ್ದಾರಿಯನ್ನು ಸುಗುಣೇಂದ್ರ ಶ್ರೀಗಳಿಗೆ ಒಪ್ಪಿಸೋಣ. ಆದರೆ ಅವರಿಗೆ ಕೃಷ್ಣ ಪೂಜೆಗೆ ಅವಕಾಶ ನೀಡುವುದು ಬೇಡ ಎಂಬ ತೀರ್ಮಾನ ಸಭೆಯಲ್ಲಿ ಹೊರಬಿತ್ತು. ತೀರ್ಮಾನಕ್ಕೆ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ಹೀಗಾಗಿ ನ.28ರಂದು ಮತ್ತೆ ಸಭೆ ನಡೆಯಲಿದೆ.
ಪುತ್ತಿಗೆ ಶ್ರೀಗಳಿಗೆ ಆಡಳಿತ ಅಧಿಕಾರ ಮಾತ್ರ ಇರಲಿ, ಪೂಜೆ ಅಧಿಕಾರಬೇಡ. ಪುತ್ತಿಗೆ ಶ್ರೀಗಳು ಸಾಗರೋಲ್ಲಂಘನೆ ಮಾಡಿ,ಸಂಪ್ರದಾಯ ಮುರಿದಿದ್ದಾರೆ. ಸಂಪ್ರದಾಯ ಎಲ್ಲರೂ ಪಾಲಿಸಬೇಕು. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರಂತೆ ಅಧಿಕಾರ ಬೇಕಿದ್ದರೆ ಹೊಂದಲಿ, ಪೂಜಿಸುವ ಅಧಿಕಾರ ಅವರಿಗೆ ಬೇಡ ಎಂಬ ಮಾತು ಸಭೆಯಲ್ಲಿ ಪ್ರತಿಧ್ವನಿಸಿತು.
ವಿವಾದದಿಂದಾಗಿ ಪುತ್ತಿಗೆ ಶ್ರೀಗಳು, ಶ್ರೀಕೃಷ್ಣ ದೇಗುಲದ ಪರ್ಯಾಯ ಪೀಠಾರೋಹಣ ಮಾಡಿ, ಪೂಜೆ ಸಲ್ಲಿಸುವ ಪ್ರಕ್ರಿಯೆ ಕಗ್ಗಂಟಾಗಿದೆ. ಪರ್ಯಾಯ ಕೃಷ್ಣಪುರ, ಪೇಜಾವರ, ಪಲಿಮಾರು, ಕಾಣಿಯೂರು, ಸೋದೆ, ಆದಮಾರು, ಶಿರೂರು ಮಠದ ಶ್ರೀಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)