ಮನೆಗೆಲಸದವರ ಮೇಲೆ ದೌರ್ಜನ್ಯ ನಡೆದರೆ ಇಲ್ಲಿ ದೂರು ನೀಡಿ
ಬೆಂಗಳೂರು, ನ.03 : ಬೆಂಗಳೂರಂಥ ನಗರದಲ್ಲಿ ಮನೆಗೆಲಸದವರು ಸಿಗೋದೆ ಕಷ್ಟ. ಸಿಕ್ಕರೂ ಅವರದು ನೂರಾಎಂಟು ಡಿಮ್ಯಾಂಡು. ಬೆಳಿಗ್ಗೆ ಕಾಫಿಯಿಂದ ಶುರುವಾಗಿ ಒಂದೆರಡು ಗಂಟೆಗಳಲ್ಲಿ ಕೆಲಸ ಮುಗಿಯುವವರೆಗೆ ಅವರು ಹೇಳಿದ ಹಾಗೆಯೇ ಕೇಳಬೇಕು. ಪಾತ್ರೆಯಲ್ಲಿ ಅನ್ನದ ಅಗಳು ಹಾಗೆಯೇ ಉಳಿದರೆ ಮರುದಿನ ಪ್ರಶ್ನಿಸುವಹಾಗಿಲ್ಲ. ಕೇಳಿದಾಗಲೆಲ್ಲ ರಜಾ ನೀಡಬೇಕು, ಹಬ್ಬದಲ್ಲಿ ಹೊಸ ಸೀರೆಯೇ ನೀಡಬೇಕು. ಇಲ್ಲದಿದ್ದರೆ ನಾಳೆಯಿಂದಲೇ ಕೆಲಸಕ್ಕೆ ದೊಡ್ಡನಮಸ್ಕಾರ! ಇತ್ಯಾದಿ ಇತ್ಯಾದಿ...
ಇಷ್ಟೆಲ್ಲ ಡಾಮಿನೇಷನ್ ಇದ್ದರೂ ಅಲ್ಲಲ್ಲಿ ಆಗಾಗ ಅವರ ಮೇಲೆಯೂ ದೌರ್ಜನ್ಯ ನಡೆಯುತ್ತಲೇ ಇರುತ್ತದೆ. ಅವರಿಗಾಗಿಯೇ ನಿಗದಿತ ಸಂಬಳವಿಲ್ಲ. ತಲೆಯ ಮೇಲೊಂದು ಸೂರಿಲ್ಲ. ಮನೆಮಾಲಿಕರಿಂದ ಕಷ್ಟಕ್ಕೆ ಸಿಲುಕಿದಾಗ ರಕ್ಷಣೆಯಂತೂ ಇಲ್ಲವೇ ಇಲ್ಲ. ಬಾಲಕರನ್ನು ಮನೆಗೆಲಸಕ್ಕೆ ನೇಮಿಸಬಾರದೆಂದು ನಿಯಮವಿದ್ದರೂ ಮಕ್ಕಳು ಚಾಕರಿ ಮಾಡುತ್ತಲೇ ಇರುತ್ತವೆ.
ಅಂತೆಯೇ ನಗರದ ಮನೆಗೆಲಸದವರೆಲ್ಲ ಸೇರಿಕೊಂಡು ಬೆಂಗಳೂರಿನಲ್ಲೊಂದು ಸಂಘ ಮಾಡಿಕೊಂಡಿದ್ದಾರೆ. ನಾಲ್ಕೈದು ಸಾವಿರ ಮನೆಗೆಲಸದವರು ಕಳೆದ ಒಂದುವರೆ ವರುಷಗಳಿಂದ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಸರಕಾರದಿಂದ ಮನ್ನಣೆಯೂ ಸಿಕ್ಕಿದೆ. ಸರಕಾರ ಮನೆಗೆಲಸದವರನ್ನು 'ವಿಶೇಷ ವರ್ಗ'ದಲ್ಲಿ ಸೇರಿಸಿದ್ದಾರೆ.
ಈ ವಿಷಯ ತಿಳಿಸಲಿಕ್ಕಾಗಿಯೇ ಸಂಘಟನೆಯ ಸೂತ್ರಧಾರಿ, ಫೌಂಡರ್, ಪ್ರೆಸಿಡೆಂಟ್ ಎಲ್ಲ ಆಗಿರುವ ಟಿ.ಕೆ.ಭಾಗ್ಯ ಎಂಬುವವರು ಶನಿವಾರ ಪತ್ರಿಕಾಗೋಷ್ಠಿ ಕರೆದಿದ್ದರು.
'ಆಶ್ರಯ' ಯೋಜನೆಯಡಿ ಮನೆಗೆಲಸದವರಿಗೆ ಸೂರು ಕಲ್ಪಿಸಿಕೊಡಬೇಕು. ವೇತನವನ್ನು ನಿಗದಿಪಡಿಸಬೇಕು. ದೌರ್ಜನ್ಯಕ್ಕೆ ಸಿಲುಕಿದವರಿಗೆ ನ್ಯಾಯ ಒದಗಿಸಿಕೊಡಬೇಕು, ರಕ್ಷಣೆ ನೀಡಬೇಕೆಂದು ಮನೆಗೆಲಸದವರು ಸರಕಾರವನ್ನು ಒತ್ತಾಯಿಸುತ್ತಿರುವುದಾಗಿ ಭಾಗ್ಯ ಹೇಳಿದರು.
ಮನೆಮಾಲಿಕರಿಂದ ಅತ್ಯಾಚಾರ, ಹಿಂಸೆ ನಡೆದಿರುವುದು ಗಮನಕ್ಕೆ ಬಂದರೆ, ಅಥವ ಮನೆಗೆಲಸದವರಿಂದ ಮನೆಮಾಲಿಕರ ಕಳ್ಳತನ, ಸುಲಿಗೆ ನಡೆದರೆ ಕೆಳಗಿನ ವಿಳಾಸಕ್ಕೆ ದೂರು ನೀಡಬೇಕಾಗಿ ಭಾಗ್ಯ ಹೇಳಿದ್ದಾರೆ.
ಮನೆಗೆಲಸದವರ
ಸಂಘ
ನಂ.126,
ಮೇಘನ
ಪಾಳ್ಯ
ಚೇಳಿಕೆರೆ,
ಕಲ್ಯಾಣನಗರ
ಬೆಂಗಳೂರು
-
560
043
ಫೋನ್
ನಂ.:
9880489655
(ದಟ್ಸ್ಕನ್ನಡ ವಾರ್ತೆ)